ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನ ದಾಳಿ ಬಳಿಕ ಭಾರತ, ಪಾಕಿಸ್ತಾನಕ್ಕೆ ಒಂದರ ಮೇಲೊಂದು ಶಾಕ್ ನೀಡುತ್ತಿದ್ದು, ಜಲ ಮೂಲವನ್ನು ಬಂದ್ ಮಾಡಿದೆ.
ಭಾರತದಿಂದ ಇಂದು ಬಗಲಿಹಾರ್, ಸಲಾಲ್ ಡ್ಯಾಮ್ ನೀರು ಪಾಕಿಸ್ತಾನಕ್ಕೆ ಹರಿಯೋದು ಸಂಪೂರ್ಣ ಬಂದ್ ಆಗಿದೆ. ರಿಯಾಸಿ ಜಿಲ್ಲೆಯ ಸಲಾಲ್ ಡ್ಯಾಮ್ನಿಂದ ನೀರು ಬಂದ್ ಆಗಿರೋದ್ರಿಂದ ಚೆನಾಬ್ ನದಿ ಪಾತ್ರ ಇದೇ ಮೊದಲ ಬಾರಿಗೆ ಸಂಪೂರ್ಣ ಖಾಲಿಯಾಗಿದೆ. ಚೆನಾಬ್ ನದಿಯಲ್ಲಿ ಈಗ ಸ್ಥಳೀಯ ಜನರು ಆರಾಮಾಗಿ ಓಡಾಡುತ್ತಿದ್ದಾರೆ.
ಕಳೆದ 75 ವರ್ಷದಲ್ಲೇ ಇದೇ ಮೊದಲ ಬಾರಿಗೆ ಚೆನಾಬ್ ನದಿ ನೀರು ಖಾಲಿಯಾಗಿರುವ ಈ ದೃಶ್ಯ ಕಾಣುತ್ತಿದ್ದೇವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಈ ಕುರಿತು ಸ್ಥಳೀಯರು ಮಾತನಾಡುತ್ತಾ , ನನಗೆ ಈಗ 75 ವರ್ಷ ವಯಸ್ಸು. ನನ್ನ ಜೀವನದಲ್ಲಿ ಎಂದೂ ಚಿನಾಬ್ ನದಿ ನೀರು ನಿಂತಿದ್ದನ್ನು ನೋಡಿಯೇ ಇಲ್ಲ. ಚೀನಾಬ್ ನದಿ ನೀರನ್ನು ನಿಲ್ಲಿಸಲು ಸಾಧ್ಯ ಎಂಬುದನ್ನು ಮೊದಲ ಬಾರಿ ನೋಡುತ್ತಿದ್ದೇವೆ. ಚೆನಾಬ್ ನದಿಯಲ್ಲಿ ಈಗ ಒಂದೂವರೆಯಿಂದ 2 ಅಡಿ ಮಾತ್ರ ನೀರು ಇದೆ. ಮುಂದಿನ 2 ಗಂಟೆಯಲ್ಲಿ ಇದು ಕೂಡ ಒಣಗಿ ಹೋಗಿ ನದಿ ಸಂಪೂರ್ಣ ಬರಿದಾಗಬಹುದು ಎಂದಿದ್ದಾರೆ.
ಇದೇ ವೇಳೆ ನಾವು ಪ್ರಧಾನಿ ಮೋದಿ ಅವರ ತೀರ್ಮಾನಕ್ಕೆ ಧನ್ಯವಾದ ಹೇಳುತ್ತೇವೆ. ನಾವೆಲ್ಲಾ ಭಾರತೀಯ ಸೇನೆ ಜೊತೆಗೆ ಇದ್ದೇವೆ ಎಂದು ತಿಳಿಸಿದ್ದಾರೆ.
ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ, ಭಾರತವು ಈಗ ಚೆನಾಬ್ ನದಿಯಿಂದ ನೀರಿನ ಹರಿವನ್ನು ನಿಲ್ಲಿಸಿದೆ. ಪಾಕಿಸ್ತಾನಕ್ಕೆ ಚೆನಾಬ್ ನದಿಯ ಹರಿವನ್ನು ನಿಯಂತ್ರಿಸುವ ಬಾಗ್ಲಿಹಾರ್ ಮತ್ತು ಸಲಾಲ್ ಅಣೆಕಟ್ಟುಗಳ ಗೇಟ್ಗಳನ್ನು ಭಾರತ ಸರ್ಕಾರ ಮುಚ್ಚಿದೆ.