ಹೊಸ ದಿಗಂತ ವರದಿ, ಕಲಬುರಗಿ:
ನಮಗೆ ಬೇಕಾದ ಅಮೂಲ್ಯ ರತ್ನಗಳನ್ನು ಈ ಹೊಸ ಶಿಕ್ಷಣ ನೀತಿಯಿಂದ ಪಡೆದುಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಸಭಾ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯ ಮತ್ತು ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನದ ಸಹಯೋಗದಲ್ಲಿ ಎನ್.ಇ.ಪಿ(ರಾಷ್ಟ್ರೀಯ ಶಿಕ್ಷಣ ನೀತಿ-2020)ಯಲ್ಲಿ ಉದಯೋನ್ಮುಖ ಶಿಕ್ಷಕರ ಪಾತ್ರ ಎಂಬ ವಿಷಯದ ಕುರಿತ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ನಾವು ಮಕ್ಕಳಿಗೆ ಅಂಧಕಾರದ ಶಿಕ್ಷಣ ನೀಡುತ್ತಿದ್ದೆವೆ. ನಾವು ಮಕ್ಕಳನ್ನು ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ನೀಡದೆ, ಅವರ ಜ್ಞಾನ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ನಿಡುವದು ಅವಶ್ಯವಾಗಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ.ಅನೀಲಕುಮಾರ ಜಿ.ಬಿಡವೆ ವಿಚಾರ ಮಂಡಿಸುತ್ತಾ, ಭಾರತ ದೇಶ ಇಡಿ ವಿಶ್ವದಲ್ಲಿಯೇ ಅತಿ ಹೆಚ್ಚು ಯುವಜನಾಂಗ ಹೊಂದಿರುವ ರಾಷ್ಟ್ರವಾಗಿದೆ ಎಂದು ನಾವೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅಂತಹ ರಾಷ್ಟ್ರಕ್ಕೆ ಗುಣಾತ್ಮಕ ಶಿಕ್ಷಣ, ಅನ್ವೇಷಣೆ ಶಿಕ್ಷಣ, ಸಂಶೋಧನಾತ್ಮಕ ಶೀಕ್ಷಣ ಹಾಗೂ ಆತ್ಮಸ್ಥೈರ್ಯ ತುಂಬುವ ಶಿಕ್ಷಣದ ಅವಶ್ಯಕತೆಯನ್ನು ಈ ಹೊಸ ಶಿಕ್ಷಣ ನೀತಿ ಪೂರೈಸುತ್ತದೆ ಎಂದು ಅಭಿಪ್ರಾಯಪಟ್ಟರು.
ಶರಣಬಸವೇಶ್ವರ ಬಿ.ಎಡ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಗೀತಾ ಇಂಗಿನಶೆಟ್ಟಿ, ಗೋದುತಾಯಿ ಬಿ.ಎಡ್ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಬಸವರಾಜೇಶ್ವರಿ ಇಂದುರ, ಬೀದರದ ದೊಡ್ಡಪ್ಪ ಅಪ್ಪಾ ಬಿ.ಎಡ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಚಯ್ಯ ಎಸ್. ಮಠಪತಿ, ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನದ ಸಂಯೋಜಕರಾದ ಕೃಷ್ಣ ಪ್ರಸಾದ ಕೆ.ಎನ್, ಭೀಮರೆಡ್ಡಿ ಇತರರು ಇದ್ದರು.