ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ವರ್ಷಗಳಿಂದ ಆದಿಪುರುಷ್ ಸಿನಿಮಾಗಾಗಿ ಕಾದಿದ್ದ ಅಭಿಮಾನಿಗಳು ಸಿನಿಮಾ ಟೀಸರ್ ನೋಡಿ ನಿರಾಸೆ ಮೂಡ್ಗೆ ತೆರಳಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದ ಚಿತ್ರ ಹಾಗೂ ನಿರ್ದೇಶಕರ ಮೇಲೆ ಟೀಕೆ, ಟ್ರೋಲ್ ಗಳ ಸುರಿಮಳೆಯಾಗುತ್ತಿದೆ.
ಪ್ರಭಾಸ್ ಅಭಿಮಾನಿಗಳೇ ಇದು ಕಾರ್ಟೂನ್ ಚಿತ್ರ, ಗ್ರಾಫಿಕ್ ಚಿತ್ರ ಎಂದು ಟ್ರೋಲ್ ಮಾಡುತ್ತಿದ್ದರೆ, ಮತ್ತೊಂದೆಡೆ ಹಾಲಿವುಡ್ ಸಿನಿಮಾದಂತಿದೆ ಅದರಲ್ಲಿ ರಾಮಾಯಣ ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ಆದಿಪುರುಷ್ ಚಿತ್ರತಂಡವನ್ನು ಟೀಕಿಸಿದ್ದು, ಮಹಾರಾಷ್ಟ್ರದಲ್ಲಿ ಆದಿಪುರುಷ ಬಿಡುಗಡೆ ಮಾಡುವುದಿಲ್ಲ. ತಮ್ಮ ಪ್ರಚಾರಕ್ಕಾಗಿ ಸಿನಿಮಾ ಮಂದಿ ಮತ್ತೊಮ್ಮೆ ನಮ್ಮ ದೇವ-ದೇವತೆಗಳಿಗೆ ಅವಮಾನ ಮಾಡಿದ್ದಾರೆ. ಕೋಟ್ಯಂತರ ಹಿಂದೂಗಳ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಹೀಗೇ ಬಿಟ್ಟರೆ ಕ್ಷಮೆಯಾಚಿಸಿ ಕೆಲವು ದೃಶ್ಯಗಳಿಗೆ ಮಾತ್ರ ಕತ್ತರಿ ಹಾಕುತ್ತಾ ಮತ್ತದೇ ಕೆಲಸ ಮಾಡುತ್ತಾರೆ. ಮತ್ತೆಂದೂ ಹಿಂದೂ ದೇವರ ಸುದ್ದಿಗೆ ಬರದಂತ ಅವರಿಗೆ ತಕ್ಕ ಪಾಠ ಕಲಿಸಬೇಕೆಂದರೆ ಸಿನಿಮಾ ರಿಲೀಸ್ ಮಾಡುವುದನ್ನು ನಿಲ್ಲಿಸಬೇಕು ಎಂದು ಗಂಭೀರವಾಗಿ ಹೇಳಿದರು.