ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಹಿಂದೂಗಳ ಪವಿತ್ರ ದೇವಾಲಯಕ್ಕೆ ಭೇಟಿ ನೀಡುವ ಸಮಯಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. 2024ರ ಮಕರ ಸಂಕ್ರಾಂತಿ ವೇಳೆಗೆ ರಾಮಮಂದಿರ ದೇವಾಲಯ ತೆರೆಯುವ ಗುರಿ ಹೊಂದಿರುವುದಾಗಿ ರಾಮಜನ್ಮಭೂಮಿ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟನೆ ನೀಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂದಿರದ ನಿರ್ಮಾಣ ಬಹುತೇಕ ಶೇ.30 ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾರ್ಯಗಳು ಭರದಿಂದ ಸಾಗಿವೆ ಎಂದಿದ್ದಾರೆ.
2023 ರ ಅಂತ್ಯದ ವೇಳೆಗೆ ರಾಮ ಜನ್ಮಭೂಮಿ ಮಂದಿರವನ್ನು ಕಾರ್ಯಾರಂಭ ಮಾಡಲಾಗುವುದು ಎಂದು ನಾನು ಮೊದಲೇ ಹೇಳಿದ್ದೆ, ಆದರೆ ಸೂರ್ಯನು ದಕ್ಷಿಣ ಪಥದಲ್ಲಿ ಇರುವುದರಿಂದ ಸೂಕ್ತ ದಿನಾಂಕ ದೊರೆತಿಲ್ಲ. ಸೂರ್ಯನು ಉತ್ತರ ದಿಕ್ಕಿಗೆ ಪ್ರವೇಶಿಸುವ ಮಕರ ಸಂಕ್ರಾಂತಿಯ ದಿನದಂದು ಮಹಾ ದೇವಾಲಯವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ರಾಮನು ಕುಳಿತುಕೊಳ್ಳಲು ಆರು ಅಡಿ ಉದ್ದದ ಗ್ರಾನೈಟ್ ಕುರ್ಚಿ ಸಿದ್ಧ ಮಾಡಲಾಗಿದೆಯಂತೆ. ಈ ವರ್ಷದ ಆಗಸ್ಟ್ನಲ್ಲಿ ಅಡಿಪಾಯದ ಕೆಲಸ ಪೂರ್ಣಗೊಂಡ ನಂತರ ದೇವಾಲಯದ ನಿರ್ಮಾಣ ಪ್ರಾರಂಭವಾಗುವುದಾಗಿ ಚಂಪತ್ ರಾಯ್ ಹೇಳಿದರು.