ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಸರ್ಕಾರವು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಮಾಂಸಾಹಾರ(ಕೋಳಿ), ಮೊಟ್ಟೆ ಮತ್ತು ಹಣ್ಣುಗಳನ್ನು ನೀಡಲು ಸಿದ್ಧವಾಗಿದೆ. ಈ ಯೋಜನೆಯು ಜನವರಿಯಿಂದ ಮುಂದಿನ ಏಪ್ರಿಲ್ ವರೆಗೆ ಜಾರಿಯಲ್ಲಿರುತ್ತದೆ. ಪ್ರಧಾನ ಮಂತ್ರಿ ಪೋಷಣ ಯೋಜನೆಯಡಿ ಮಧ್ಯಾಹ್ನದ ಊಟದ ಯೋಜನೆಗೆ ಹೆಚ್ಚುವರಿಯಾಗಿ ಧನಸಹಾಯ ನೀಡಲಾಗುತ್ತದೆ.
ಪಶ್ಚಿಮ ಬಂಗಾಳ ಸರ್ಕಾರವು ಪ್ರಸ್ತುತ ಊಟದ ಜೊತೆಗೆ ಆಲೂಗಡ್ಡೆ, ಸೋಯಾ ಬೀನ್ಸ್, ಮೊಟ್ಟೆ, ಕೋಳಿ ಮತ್ತು ಋತುಮಾನದ ಹಣ್ಣುಗಳನ್ನು ನೀಡಲು ನಿರ್ಧರಿಸಿದೆ. ವಾರಕ್ಕೊಮ್ಮೆ ಕೋಳಿ ಮತ್ತು ಹಣ್ಣುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಹೆಚ್ಚುವರಿಯಾಗಿ 371 ಕೋಟಿ ರೂ. ಅಂದರೆ ಪ್ರತಿ ವಿದ್ಯಾರ್ಥಿಗೆ ವಾರಕ್ಕೆ 20 ರೂ.ಗಳನ್ನು ಹೆಚ್ಚುವರಿಯಾಗಿ ನಿಗದಿಪಡಿಸಲಾಗಿದೆ. ಈ ಯೋಜನೆಯನ್ನು ಏಪ್ರಿಲ್ ವರೆಗೆ ಮುಂದುವರಿಸಲು ನಿರ್ಧರಿಸಲಾಗಿದ್ದರೂ, ನಂತರ ಅದನ್ನು ಮುಂದುವರಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ವರ್ಷ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಮತದಾರರನ್ನು ಮೆಚ್ಚಿಸುವ ಉದ್ದೇಶದಿಂದ ಮಮತಾ ಬ್ಯಾನರ್ಜಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆಯಂತೆ. ಪಶ್ಚಿಮ ಬಂಗಾಳ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1.16 ಕೋಟಿ ವಿದ್ಯಾರ್ಥಿಗಳಿದ್ದಾರೆ.
ಇವರೆಲ್ಲರಿಗೂ ಮಧ್ಯಾಹ್ನದ ಊಟದ ಯೋಜನೆ ಜಾರಿಗೊಳಿಸಲಾಗುತ್ತಿದೆ. 60ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಲಿದ್ದು, ಶೇ 40ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ. ಪ್ರಸ್ತುತ ನಿಗದಿಪಡಿಸಿದ ಹಣವು ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದೆ. ಆದರೆ, ಸರ್ಕಾರದ ನಿರ್ಧಾರವನ್ನು ಬಿಜೆಪಿ ಟೀಕಿಸುತ್ತಿದೆ. ಇಷ್ಟು ವರ್ಷ ಅನ್ನ, ಬೇಳೆಕಾಳು ಮಾತ್ರ ನೀಡಿ, ಈಗ ಕೋಳಿ ಕೂಡ ಕೊಡಲು ಚುನಾವಣೆ ಕಾರಣ ಎಂದು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ಟೀಕಿಸುತ್ತಿದೆ.