ಹೊಸದಿಗಂತ ವರದಿ ಹುಬ್ಬಳ್ಳಿ :
ಸಚಿವ ಅಶ್ವತ್ಥನಾರಾಯಣ ತಮ್ಮ ವಿರುದ್ಧ ಮಾಡಿರುವ ವಾಗ್ದಾಳಿ ಬಗ್ಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರಿಯೋ ತಪ್ಪೋ ಎಂದು ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡುತ್ತ ಸಿದ್ದರಾಮಯ್ಯನವರು ಹೇಳಿದ್ದಿಷ್ಟು: “ರಾಜ್ಯದಲ್ಲಿ ಅಭಿವೃದ್ಧಿ, ರೈತರ, ಬಡವರ, ದಲಿತರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಬಿಜೆಪಿ ಪ್ರಣಾಳಿಕೆಯಲ್ಲಿ ಬರುವ ಚುನಾವಣೆ ಟಿಪ್ಪು ಹಾಗೂ ಸಾವರ್ಕರ್ ಎಂದು ಬರೆದುಕೊಳ್ಳಲಿ. ಇದನ್ನು ಜನರು ತೀರ್ಮಾನ ಮಾಡಲಿ. ಜನರಿಗೆ ಪ್ರಚೋದನೆ ನೀಡುವ ಮೂಲಕ ಇದಕ್ಕೆಲ್ಲಾ ಪ್ರೋತ್ಸಾಹ ನೀಡುತ್ತಿರುವುದು ಖಂಡನೀಯ.”
“ರಾಜ್ಯದ ಪ್ರಜೆಗಳ ಜೀವ ಹಾಗೂ ಆಸ್ತಿ ರಕ್ಷಣೆ ಕೊಡಬೇಕಾದವರು ಯಾರು? ಸರ್ಕಾರ ನನ್ನನ್ನು ಮುಗಿಸಿ ಎಂಬುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ರಾಜ್ಯಪಾಲರು ಸಚಿವ ಸಂಪುಟದಿಂದ ವಜಾ ಮಾಡಬೇಕು. ಸಿದ್ದರಾಮಯ್ಯನನ್ನು ಮುಗಿಸಿರಿ ಅಂದ್ರೆ ಎನ್ ಅರ್ಥ? ಇದನ್ನೂ ಎಲ್ಲರೂ ಖಂಡಿಸಬೇಕು.”