ಧರ್ಮ ಒಡೆಯಲು ಮುಂದಾದವರ ಬಾಯಿಂದ ಮತ್ತೇನು ನಿರೀಕ್ಷೆ ಸಾಧ್ಯ: ತೇಲ್ಕೂರ ಆಕ್ರೋಶ

ಹೊಸದಿಗಂತ ವರದಿ , ಕಲಬುರಗಿ:

ವೀರಶೈವ- ಲಿಂಗಾಯತದಲ್ಲಿ ಒಡಕು ತರಲು ಯತ್ನಿಸಿದವರ, ಅದರಲ್ಲೂ ಹಿಂದೂ ಧರ್ಮ ಒಡೆಯಲು ಮುಂದಾದವರ ಬಾಯಿಂದ ಮಾತ್ರ ನಾಯಿಮರಿ- ನರಿ ಶಬ್ದಗಳ ಬಳಕೆ ಸಾಧ್ಯವೆಂದು ಬಿಜೆಪಿ ರಾಜ್ಯ ವಕ್ತಾರ, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಸಿದ್ದರಾಮಯ್ಯ ಏಕ ವಚನದಲ್ಲಿ ಮಾತನಾಡಿದ್ದರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಮರಿ ಎಂಬಿತ್ಯಾದಿ ಟೀಕಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ಸಂಸ್ಕಾರ ಇಲ್ಲದ ನಾಲಿಗೆ ಹಾಗೂ ಸಂಸ್ಕಾರ ಹೀನ ಮನುಷ್ಯ ಎಂಬುದು ಸಾಬೀತುಪಡಿಸುತ್ತದೆ ಎಂದು ತೇಲ್ಕೂರ ತಿರುಗೇಟು ನೀಡಿದ್ದಾರೆ.

ಈ ಹಿಂದೆ ತುರ್ತು ಪರಿಸ್ಥಿತಿ ವಿರುದ್ಧ ಮಾತನಾಡಿದ್ದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸೇರಿದ ನಂತರ ಆ ಕುರಿತಂತೆ ಯಾವುದೇ ಮಾತನಾಡುತ್ತಿಲ್ಲ. ಅಂದರೆ ಅವರ ಸಮಯ ಸಾಧಕತನ ಎತ್ತಿ ತೋರಿಸುತ್ತದೆ. ಸುಳ್ಳು, ಕುಟಿಲತನ, ಸಹಾಯ ಮಾಡಿದವರ ಬೆನ್ನಿಗೆ ಚೂರಿ ಹಾಕುವುದು ಅವರ ಮೂರು ಗುಣಗಳು ಎಂದು ಟೀಕಿಸಿದ್ದಾರೆ.

ಸ್ವಾರ್ಥಕ್ಕಾಗಿ ನಾಗರೀಕತೆಯನ್ನೇ ಮರೆತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯ ಮಂತ್ರಿಗಳವರನ್ನು ನಾಯಿಮರಿ ಎಂದಿದ್ದಾರೆ. ತಮಗೆ ನಾಯಿ ಬಗ್ಗೆ ಗೌರವವಿದೆ‌. ಪ್ರಮಾಣಿಕ ಹಾಗೂ ನಂಬಿಗಸ್ಥತನಕ್ಕೆ ಇನ್ನೊಂದು ಹೆಸರೇ ನಾಯಿಯಾಗಿದೆ. ಯಾವತ್ತು ಕಳ್ಳರನ್ನು ನೋಡಿದಾಗ ನಾಯಿ ಬೊಗಳುತ್ತದೆ. ಪ್ರಮುಖವಾಗಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಭಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಮನಸ್ಸಿಗೆ ಬಂದಂತೆ ಹೇಳುತ್ತಿದ್ದಾರೆ. ಇದಕ್ಕೆ ಜನ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆಗಾಗಿ ಸ್ಪರ್ಧೆ ಹಾಗೂ ಕಾಲೆಳುವ ಪ್ರವೃತ್ತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ಬಿಜೆಪಿ ಪರವಾಗಿ ರಾಜದಾದ್ಯಂತ ವ್ಯಾಪಕವಾಗಿ ಅಲೆ ಇರೋದನ್ನು ಮನಗಂಡು ಸಿದ್ದರಾಮಯ್ಯ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆಯೇ ? ಎಂದು ತೇಲ್ಕೂರ ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!