ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ನಿಲುವೇನು: ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಹಿಂದೆ ಆರ್ಭಟ ಮಾಡಿದ್ದ ಮತ್ತು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್ ಮತ್ತು ಇತರ ಮುಖಂಡರು ಈಗ ಆ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಸಂಬಂಧ ತಮಿಳುನಾಡಿನ ಸಚಿವ ದೊರೆಮುರುಗನ್ ಅವರು ಆಕ್ರಮಣಕಾರಿ ವರ್ತನೆ ಕೈಬಿಡಿ ಎಂದಿದ್ದಾರೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಹೋರಾಟ ಮಾಡಿದ್ದ ಕಾಂಗ್ರೆಸ್ಸಿಗರು ಈಗ ತಮ್ಮ ನಿಲುವನ್ನು ತಿಳಿಸಲಿ ಎಂದು ಒತ್ತಾಯಿಸಿದರು.

ನಿಮ್ಮ ಪಕ್ಷದ ಬೆಂಬಲದ ಸರಕಾರ ತಮಿಳುನಾಡಿನಲ್ಲಿದೆ. ಈಗ ನೀವು ಏನು ಉತ್ತರ ಕೊಡುತ್ತೀರಿ? ಏನು ಕ್ರಮ ಕೈಗೊಳ್ಳುತ್ತೀರಿ? ಈಗ ನೀವು ಉತ್ತರದಾಯಿತ್ವ ಪ್ರದರ್ಶಿಸಬೇಕಿದೆ ಎಂದು ತಿಳಿಸಿದರು. ಹಿಂದೆ ನೀವು ನಮ್ಮ ಮೇಲೆ ಇದನ್ನು ಚುನಾವಣೆ ಟೂಲ್ ಕಿಟ್ ಆಗಿ ಬಳಸಿದ್ದೀರಿ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ನಿಂತು ಭಾರತದ ಅಪಮಾನ ಮಾಡಿದ್ದನ್ನು ಮತ್ತೆ ಖಂಡಿಸಿದ ಅವರು, ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆ ಸೇರಿ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಕರೆಯ ಕುರಿತು ಮಾತನಾಡಿದರು. ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆ ಯಾಕೆ ಸೇರಬೇಕು? ಬಿಜೆಪಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ದುರಾಡಳಿತ, ದುರ್ನಡತೆ ವಿರುದ್ಧ ಜನ್ಮ ತಾಳಿವೆ ಎಂದು ನೆನಪಿಸಿದರು.

ಕಾಂಗ್ರೆಸ್ ಪಕ್ಷ ಬಿಜೆಪಿಗೆ ಸರಿಸಾಟಿಯಲ್ಲ ಎಂದ ಅವರು, 1980ರ ದಶಕದಲ್ಲಿ ಭಾರತದಲ್ಲಿ ದಲಿತರು ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಅವರು ಅದನ್ನು ವಿದೇಶಿ ನೆಲದಲ್ಲಿ ಹೇಳಬಾರದಿತ್ತು ಎಂದರಲ್ಲದೆ, ಆಗ ಇಲ್ಲಿ ಇಂದಿರಾ ಗಾಂಧಿಯವರ ಸರಕಾರ ಅಧಿಕಾರದಲ್ಲಿತ್ತು ಎಂದು ವಿವರಿಸಿದರು. ನಂತರ ರಾಜೀವ್ ಗಾಂಧಿಯವರ ಸರಕಾರ ಇತ್ತಲ್ಲವೇ ಎಂದು ಪ್ರಶ್ನಿಸಿದರು.

1980ರ ದಶಕದ ದಲಿತರ ಪರಿಸ್ಥಿತಿಯನ್ನು ಇಲ್ಲಿ ಈಗ ಮುಸ್ಲಿಮರು ಎದುರಿಸುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದರು. ಯಾವ ಮುಸ್ಲಿಮರೂ ಈಗ ಸಂಕಷ್ಟ, ಆತಂಕದ ಪರಿಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು. ಒಂದು ಸಮುದಾಯ ಓಲೈಸಲು ಮತ್ತು ಎತ್ತಿಕಟ್ಟಲು ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಅವಮಾನ ಮಾಡಿದ, ನಿಂದಿಸಿದ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ಸಿನಿಂದ ಉಚ್ಚಾಟಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪತ್ರ ಮೂಲಕ ಒತ್ತಾಯಿಸುವುದಾಗಿ ತಿಳಿಸಿದರು. ಅವರ ಪೌರತ್ವ ರದ್ದು ಮಾಡಲು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!