ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿವೀರರ ನೇಮಕಾತಿಯಲ್ಲಿ ಗರಿಷ್ಟ ವಯೋಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೇರಿಸಿ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ. ಅಗ್ನಿಪಥದ ವಿರುದ್ಧ ವ್ಯಾಪಕ ಪ್ರತಿಭಟನೆಗಳಾಗುತ್ತಿರುವ ಬೆನ್ನಲ್ಲೇ ಹೊಸ ಆದೇಶ ನೀಡಿರುವ ಸರ್ಕಾರದ ಕ್ರಮವನ್ನು ಸೇನಾಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸ್ವಾಗತಿಸಿದ್ದಾರೆ.
ವಯೋಮಿತಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ಜನರಲ್ ಮನೋಜ್ ಪಾಂಡೆಯವರು “ಅಗ್ನಿಪಥ್ ಯೋಜನೆಯ ವಯಸ್ಸಿನ ಮಿತಿಯನ್ನು ಒಂದು ಬಾರಿ ಮನ್ನಾ ಮಾಡುವ ಮೂಲಕ ಗರಿಷ್ಟ ವಯೋಮಿತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಈ ಹಿಂದೆ ವಯಸ್ಸನ್ನು 17.5ರಿಂದ 21ವರ್ಷಕ್ಕೆ ಮಾತ್ರ ನಿಗದಿಪಡಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ನೇಮಕಾತಿ ರ್ಯಾಲಿಗಳಿಗೆ ಸೇರಲು ತಯಾರಿ ನಡೆಸುತ್ತಿದ್ದ ನಮ್ಮ ಅನೇಕ ದೇಶಭಕ್ತ ಯುವಕರಿಗೆ ಇದು ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ” ಎಂದಿದ್ದಾರೆ.
“ನೇಮಕಾತಿ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಅಗ್ನಿವೀರರಾಗಿ ಭಾರತೀಯ ಸೇನೆಗೆ ಸೇರಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ನಮ್ಮ ಯುವಕರಿಗೆ ನಾವು ಕರೆ ನೀಡುತ್ತೇವೆ” ಎಂದು ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಹೇಳಿದ್ದಾರೆ.