ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ಕೋಪಕ್ಕೆ ಜಾರ್ಖಾಂಡ್ ಸರ್ಕಾರ ತುತ್ತಾಗಿದೆ. ಕಳೆದ ಕೆಲ ದಿನಗಳಿಂದ ಜಾರ್ಖಾಂಡ್ನಲ್ಲಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯದಿಂದ ಸಿಡಿಮಿಡಿಗೊಂಡಿದ್ದಾರೆ.
ರಾಜ್ಯ ರಾಜಧಾನಿ ರಾಂಚಿ ಮತ್ತು ಜೆಮ್ಶೆಡ್ಪುರ ಹೊರತುಪಡಿಸಿ ಎಲ್ಲಾ ನಗರಗಳಲ್ಲಿ ಅಘೋಷಿತ ವಿದ್ಯುತ್ ಕಡಿತ ಮಾಡುತ್ತಿರುವುದಕ್ಕೆ ಸಾಕ್ಷಿ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ತಮ್ಮ ಮಗಳೊಂದಿಗೆ ರಾಂಚಿಯಲ್ಲಿ ನೆಲೆಸಿರುವ ಸಾಕ್ಷಿ, ಅಲ್ಲಿನ ವಿದ್ಯುತ್ ಸಮಸ್ಯೆ ವಿರುದ್ಧ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಟ್ವಿಟರ್ ವೇದಿಕೆಯಲ್ಲಿ ಸಾಕ್ಷಿ ಸಿಂಗ್ ಧೋನಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೆರಿಗೆ ಪಾವತಿದಾರನಾಗಿ ನಾನು ಜಾರ್ಖಂಡ್ ಸರ್ಕಾರವನ್ನು ಪ್ರಶ್ನಿಸುತ್ತಿದ್ದೇನೆ. ರಾಜ್ಯದಲ್ಲಿ ಈಷ್ಟು ವರ್ಷಗಳಿಂದ ಇಲ್ಲದ ವಿದ್ಯುತ್ ಬಿಕ್ಕಟ್ಟು ಈಗ ಏಕೆ..? ಜವಾಬ್ದಾರಿಯುತ ನಾಗರೀಕರಾಗಿ ವಿದ್ಯುತ್ ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೂ ಸರ್ಕಾರ ವಿದ್ಯುತ್ ಕಡಿತವನ್ನು ಏಕೆ ನಿಲ್ಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಾಕ್ಷಿ ಸಿಂಗ್ ಧೋನಿ ಟ್ವೀಟ್ಗೆ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಚಾರಕ್ಕೆ ನೆಟ್ಟಿಗರು ಕುತೂಹಲಕಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲವರು ಸಾಕ್ಷಿಯನ್ನು ಬೆಂಬಲಿಸಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದರೆ, ಮತ್ತೆ ಕೆಲವರು ರಾಜಕೀಯಕ್ಕೆ ಏನಾದರೂ ಪ್ರಯತ್ನಿಸುತ್ತಿದ್ದೀರಾ..? ಎಂದು ಟ್ವೀಟ್ ಮಾಡುತ್ತಿದ್ದಾರೆ.