ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಾರಾಯಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಹೈದ್ರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಎಂಬಾತನನ್ನು ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ), 2002 ರ ಅಡಿಯಲ್ಲಿ ಈತನನ್ನು ಬಂಧಿಸಲಾಗಿದ್ದು ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪ ಈತನ ಮೇಲಿದೆ. ಪಿಳ್ಳೈ ಅವರನ್ನು ಈ ಹಿಂದೆ ಇಡಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು, ಅವರ ನಿವಾಸವನ್ನು ಶೋಧಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅರುಣ್ ರಾಮಚಂದ್ರ ಪಿಳ್ಳೈ ಕುರಿತಾಗಿ ನೀವು ತಿಳಿದುಕೊಳ್ಳಬೇಕಿರೋ ಮಾಹಿತಿ ಇಲ್ಲಿದೆ.
ಯಾರೀತ ?
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ಪಿಳ್ಳೈ, ಹೈದರಾಬಾದ್ ಮೂಲದ ಒಬ್ಬ ಮದ್ಯ ಉದ್ಯಮಿ. ದಕ್ಷಿಣ ಭಾರತದ ಪ್ರಭಾವಿ ವ್ಯಕ್ತಿಗಳು, ನಾಯಕರನ್ನು ಒಳಗೊಂಡಿರುವ ʼಸೌಥ್ ಗ್ರುಪ್ʼ ನ ಸದಸ್ಯನಾಗಿರುವ ಈತ ದೆಹಲಿಯಲ್ಲಿ ಮದ್ಯದ ಪರವಾನಗಿಯನ್ನು ಪಡೆಯಲು ರಾಜಕಾರಣಿಗಳಿಗೆ ಅಕ್ರಮವಾಗಿ ಹಣಸಂದಾಯ ಮಾಡಿದ್ದಾನೆ ಎಂದು ಇಡಿ ಆರೋಪಿಸಿದೆ. ದಕ್ಷಿಣ ಭಾರತದ ಮೂಲದ ಮದ್ಯ ತಯಾರಿಕಾ ಕಂಪನಿ ʼಇಂಡೋಸ್ಪಿರಿಟ್ಸ್ʼ ಗುಂಪಿನಲ್ಲಿಯೂ ಪ್ರಮುಖ ಎನಿಸಿರೋ ಪಿಳ್ಳೈ ಈ ಕಂಪನಿಯಲ್ಲಿ 32.5 ಶೇ. ಪಾಲು ಹೊಂದಿದ್ದಾನೆ.
ಆಮ್ ಆದ್ಮಿ ಪಕ್ಷ(AAP)ದ ನಾಯಕರಿಗೆ ಈತ ಸುಮಾರು 100 ಕೋಟಿ ರೂ. ಮೌಲ್ಯದ ‘ಕಿಕ್ಬ್ಯಾಕ್’ ಕಳುಹಿಸಿದ್ದಾನೆ ಎಂದು ಇಡಿ ಆರೋಪಿಸಿದೆ. ಸಿಬಿಐ ವರದಿ ಪ್ರಕಾರ, ದೆಹಲಿಯಲ್ಲಿ ಜಾರಿಗೆ ತರಲಾಗಿದ್ದ ನೂತನ ಮದ್ಯನೀತಿ ವಿಷಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ದೆಹಲಿ ಅಬಕಾರಿ ನೀತಿ 2021-22 ಅನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಪಿಳ್ಳೈ ಸಕ್ರಿಯ ಪಾತ್ರ ವಹಿಸಿದ್ದ ಎನ್ನಲಾಗಿದೆ.