ದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಬಂದ್ ಮಾಡುವ ಯಾವುದೇ ಸಂದರ್ಭವಿಲ್ಲ. ಎಂಇಎಸ್ ಪುಂಡಾಟಿಕೆ ಖಂಡಿಸಿ ಸರ್ಕಾರ ಈಗಾಗಲೇ ಅಪರಾಧಿಗಳನ್ನು ಬಂಧಿಸಿ, ಎಲ್ಲ ರೀತಿ ಕಠಿಣ ಕ್ರಮಕೈಗೊಂಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡದ ನೆಲ,ಜಲ ಭಾಷೆಯನ್ನು ಗೌರವಿಸುವ ಮತ್ತು ಉಳಿಸುವ ದೃಷ್ಟಿಯಿಂದ ಸರ್ಕಾರ ಎಲ್ಲ ರೀತಿ ಬದ್ಧತೆ ಪ್ರದರ್ಶನ ಮಾಡಿದೆ ಎಂದರು.
ಕೊರೋನಾದಿಂದ ಜನಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ.ಇಂತಹ ಸಮಯಲ್ಲಿ ಬಂದ್ ಮಾಡುವುದರಿಂದ ಜನರ ಜೀವಕ್ಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.ಆದರಿಂದ ಕನ್ನಡ ಪರ ಸಂಘಟನೆಗಳು ಯೋಚನೆ ಮಾಡಿ ಕೈಬಿಡಬೇಕು ಎಂದು ಮನವಿ ಮಾಡಿದರು. ಬಲವಂತವಾಗಿ ಬಂದ್ ಮಾಡಿಸುವುದರಲ್ಲಿ ಅರ್ಥವಿಲ್ಲ ಎಂದರು.
ಎಂಇಎಸ್ ರಾಜ್ಯದಲ್ಲಿ ನಿಷೇಧ ಮಾಡುವುದಕ್ಕೆ ಸಮಾಲೋಚನೆಗಳು ಆಗುತ್ತಿವೆ. ಏಕಾಏಕಿ ಮಾಡುವುದಕ್ಕೆ ಸಾಧ್ಯವಾಗದು. ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಲಾಗಿದೆ ಎಂದು ತಿಳಿಸಿದರು.
ಕನ್ನಡ ಪರ ಸಂಘಟನೆಗಳು ಬಂದು ಮಾತನಾಡಿ ಸಮಸ್ಯೆ ಬಗ್ಗೆ ಸಮಾಲೋಚನೆ ಮಾಡಿ ಅವರು ಬೇಡಿಕೆ ಏನೆಂದು ತಿಳಿಸಲಿ ಎಂದರು.