ಹೊಸ ದಿಗಂತ ವರದಿ, ಅಂಕೋಲಾ:
ಬೆಳೆಗಾರರ ಸಮಿತಿ ಅಂಕೋಲಾ ಇವರ ಆಶ್ರಯದಲ್ಲಿ ತಾಲೂಕಿನ ಅಡ್ಲೂರ್ ಗ್ರಾಮದಲ್ಲಿ ಕೃಷಿ ಉತ್ತೇಜನಾ ಕಾರ್ಯಕ್ರಮ ನಡೆಯಿತು.
ಯುವಕರನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕೃಷಿ ಉತ್ತೇಜನಾ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಟುಂಬ ಸಮೇತ ಪಾಲ್ಗೊಂಡು ರೈತರೊಂದಿಗೆ ಗದ್ದೆ ಉಳಿಮೆ ಮಾಡಿ ಸಸಿ ನಾಟಿ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಅಭಿವೃದ್ಧಿಗೆ ಕೃಷಿ ಅತ್ಯಂತ ಅವಶ್ಯಕವಾಗಿದ್ದು ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಜಿಲ್ಲೆಯಲ್ಲಿ ರೈತರು ಕೃಷಿ ಕಾರ್ಯಗಳಿಂದ ವಿಮುಖರಾಗುತ್ತಿದ್ಧು ಯುವ ಜನರು ಕೃಷಿಯತ್ತ ಹೆಚ್ಚಿನ ಆಸಕ್ತಿ ತೋರಬೇಕು, ಸರ್ಕಾರದ ಸೌಲಭ್ಯಗಳನ್ನು ಯೋಜನೆಗಳನ್ನು ಬಳಸಿಕೊಂಡು ಆಧುನಿಕ ತಂತ್ರಜ್ಞಾನದ ಮೂಲಕ ರೈತಾಬಿ ನಡೆಸಿ ಹೆಚ್ಚಿನ ಇಳುವರಿ ಪಡೆಯಲು ಗಮನ ಹರಿಸಬೇಕು ಎಂದ ಅವರು , ಕರಿ ಇಶಾಡ ಮಾವಿನ ಹಣ್ಣುನ್ನು ಬ್ರಾಂಡ್ ಮಾಡಲು ಜಿಲ್ಲಾಡಳಿತ ನಬಾರ್ಡ್ ಜೊತೆ ಕೈ ಜೋಡಿಸಿದ್ದು, ಕೃಷಿಕರು ಬೆಳೆಯುವ ಉತ್ಪನ್ನಗಳ ಸಂಸ್ಕರಣೆ ಮತ್ತು ಉತ್ತಮ ಬೆಲೆ ದೊರಕಿಸಿಕೊಡಲು ಜಿಲ್ಲಾಡಳಿತ ಕೈ ಜೋಡಿಸಲಿದೆ ಎಂದರು.
ಬೆಳೆಗಾರರ ಸಮಿತಿ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ದೇವರಾಯ ನಾಯಕ, ಭಾಸ್ಕರ ನಾರ್ವೇಕರ್, ಹನುಮಂತ ಗೌಡ, ಕಾರ್ಯದರ್ಶಿ ರಾಮಚಂದ್ರ ಹೆಗಡೆ, ಯುವ ಒಕ್ಕೂಟದ ಅಧ್ಯಕ್ಷ ಗೋಪಾಲ ನಾಯಕ, ಪ್ರಮುಖರುಗಳಾದ ಜಿ.ಎಂ.ಶೆಟ್ಟಿ, ಗೋಪಾಲ ನಾಯಕ, ಬಿಂದೇಶ ಹಿಚ್ಕಡ ಮೊದಲಾದವರು ಪಾಲ್ಗೊಂಡಿದ್ದರು.