ಮಡಿಕೇರಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು, ಕಾಫಿ ತೋಟದಲ್ಲಿ ಮೂಳೆಗಳು ಪತ್ತೆ!

ಹೊಸದಿಗಂತ ವರದಿ ಮಡಿಕೇರಿ:

ಬುಡಕಟ್ಟು ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಸಮೀಪ ಬೆಳ್ಳೂರಿನಲ್ಲಿ ನಡೆದಿದ್ದು, ದೇಹದ ಅಂಗಾಂಗಗಳು ಪತ್ತೆಯಾಗಿವೆ.

ಪಣಿ ಎರವರ ಚೋಂದು (25) ಮೃತಪಟ್ಟ ಮಹಿಳೆ. ಮಹಿಳೆಯ ಕಾಲು, ದೇಹದ ಮೂಳೆಗಳು ಮತ್ತು ಬಟ್ಟೆ ಮನೆಯ ಹಿಂದಿನ ಕಾಫಿ ತೋಟದಲ್ಲಿ ಪತ್ತೆಯಾಗಿದೆ.

‘ಬೆಳ್ಳೂರಿನ ಗಿರಿಜನ ಹಾಡಿಯ ನಿವಾಸಿ ಪಣಿ ಎರವರ ರಾಜು ಅವರ ಪತ್ನಿ ಚೋಂದು ಶನಿವಾರ ಮಧ್ಯರಾತ್ರಿ ಮನೆಯಿಂದ ಹೊರಗೆ ಹೋಗಿದ್ದರು. ಆಕೆಯ ಪತಿ ಬೆಳಗ್ಗೆ ಎದ್ದು ಹುಡುಕಾಡಿದಾಗ ಮನೆಯಿಂದ 500 ಮೀಟರ್ ದೂರದ ಪೊದೆಯೊಂದರಲ್ಲಿ ಮಹಿಳೆಯ ಒಂದು ಕಾಲು ಮತ್ತು ಬಟ್ಟೆ ಕಂಡು ಬಂದಿದೆ.

ಮೃತ ಮಹಿಳೆಯ ಸಹೋದರಿ ನೇತ್ರಾ ಅವರು ಶ್ರೀಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಬ್‌ ಇನ್ಸ್‌ಪೆಕ್ಟರ್ ತನಿಖೆ ಕೈಗೊಂಡಿದ್ದಾರೆ.

‘ಬಹಿರ್ದೆಸೆಗೆಂದು ಹೊರಗೆ ಹೋದಾಗ ಯಾವುದೋ ಪ್ರಾಣಿಗಳು ದಾಳಿ ಮಾಡಿ ತಿಂದು ಹಾಕಿರಬಹುದೆಂದು ಶಂಕಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಗೊತ್ತಾಗಲಿದೆ’ ಎಂದು ಕುಟ್ಟ ಸಿಪಿಐ ರವಿಶಂಕರ್ ತಿಳಿಸಿದ್ದಾರೆ.

ಸ್ಥಳಕ್ಕೆ ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!