ಹೊಸದಿಗಂತ ವರದಿ ಅಂಕೋಲಾ:
ವಿಪರೀತ ಸೊಂಟ ನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದ ಮಹಿಳೆ ಮನೆಗೆ ವಾಪಸಾಗಿದ್ದಾರೆ.
ವೈದ್ಯರು ನೀಡಿರುವ ಮಾತ್ರೆ ನುಂಗಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಘಟನೆ ತಾಲೂಕಿನ ಕೇಣಿ ಗ್ರಾಮದ ದತ್ತಾತ್ರೇಯ ದೇವಾಲಯದ ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಕೇಣಿ ನಿವಾಸಿ ಗೀತಾ ರಾಜು ನಾಯ್ಕ(53) ಮೃತ ದುರ್ದೈವಿ. ಸೊಂಟ ನೋವು ಬಂದ ಹಿನ್ನೆಲೆಯಲ್ಲಿ ಕೇಣಿ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ವೈದ್ಯ ಡಾ.ವೆಂಕಟೇಶ ಕೇಣಿಕರ್ ಎನ್ನುವವರ ಬಳಿ ಕರೆದುಕೊಂಡು ಹೋಗಲಾಗಿತ್ತು.
ಅಲ್ಲಿ ವೈದ್ಯರು ಇಂಜೆಕ್ಷನ್ ನೀಡಿ ಎರಡು ಮಾತ್ರೆ ಕೊಟ್ಟು ಒಂದು ಮಾತ್ರೆಯನ್ನು ತಕ್ಷಣ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ಮನೆಗೆ ತೆರಳಿ ಮಾತ್ರೆ ನುಂಗಿದ ಗೀತಾ ಕೇಲವೇ ಕ್ಷಣದಲ್ಲಿ ವಾಂತಿ ಮಾಡಿ ಕುಸಿದು ಬಿದ್ದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತ ದೇಹವನ್ನು ಕಾರವಾರ ಜಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಮೃತಳ ಪತಿ ವಿಕಲಚೇತನರಾಗಿದ್ದು ಗೀತಾಳ ಸಾವಿನಿಂದ ಆಘಾತಗೊಂಡಿದ್ದಾರೆ.
ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್.ಐ ಮಹಾಂತೇಶ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯರ ನಿರ್ಲಕ್ಷ್ಯದ ಕುರಿತು ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.