ಮಾ.12: ಮುಡಿಪು ಭಾರತೀ ಶಾಲೆಯಲ್ಲಿ ಮಹಿಳಾ ಕಲರವ: ನಿವೃತ್ತ ಶಿಕ್ಷಕಿಯರಿಗೆ ಗೌರವ, ವಿವಿಧ ಸ್ಪರ್ಧೆಗಳ ಸಡಗರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಮುಡಿಪು ಶ್ರೀ ಭಾರತೀ ಶಾಲೆಯಲ್ಲಿ ಅಮೃತ ಮಹೋತ್ಸವ ಪ್ರಯುಕ್ತ ಹಳೆ ವಿದ್ಯಾರ್ಥಿ ಸಂಘ ಪ್ರತಿ ತಿಂಗಳು ವಿಶೇಷ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಅಮೃತ ಮಹೋತ್ಸವ ಮಹಿಳಾ ಸಮಿತಿ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿ ಸಂಘವು ಮಾರ್ಚ್ 12ರಂದು ಆದಿತ್ಯವಾರ ಬೆಳಗ್ಗೆ 9.30ರಿಂದ ದಿನಪೂರ್ತಿ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”ಯನ್ನು ಆಚರಿಸಲು ನಿರ್ಧರಿಸಿದೆ.

ಆ ದಿನ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಾದ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ‘ ಮಹಿಳೆ ನಿನ್ನಿಂದಲೇ ಈ ಇಳೆ’ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಗ್ಗೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಕುಮಾರಿ ವಹಿಸುವರು. ಅತಿಥಿಗಳಾಗಿ ಪ್ರಮುಖರಾದ ಮಮತಾ ಡಿ.ಎಸ್.ಗಟ್ಟಿ, ಸುಖಲತಾ ದೇವದಾಸ್ ಭಂಡಾರಿ, ಮೈನಾ ಶ್ರೀನಾಥ್ ಕೊಂಡೆ, ವತ್ಸಲಾ ಪಿ., ವಾರಣಾಸಿ ಗಣೇಶ್ ಭಟ್, ಶಂಕರಿ ಎಸ್.ಎನ್. ಭಟ್ ಪಾಲ್ಗೊಳ್ಳುವರು. ಈ ಸಮಾರಂಭದಲ್ಲಿ ಭಾರತೀ ಶಾಲೆಯ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಎಂ.ಕೆ.ಲೀಲಾ, ಶ್ರೀಮತಿ ಎ.ಸುಧಾ, ಶ್ರೀಮತಿ ಕಮಲಾಕ್ಷಿ ಹಾಗೂ ಶ್ರೀಮತಿ ಶಶಿಕಲಾ ಜಿ. ಅವರನ್ನು ಗೌರವಿಸಲಾಗುವುದು.

ಹಳೆ ವಿದ್ಯಾರ್ಥಿನಿ, ಕವಯಿತ್ರಿ ಪಂಕಜಾ ಕೆ.ರಾಮ ಭಟ್ ಹಾಗೂ ಮುಡಿಪು ನವಗ್ರಾಮದ ಶ್ರೀಮತಿ ಕಮಲಾ ಭಟ್ ಅವರನ್ನು ಸನ್ಮಾನಿಸಲಾಗುವುದು. ವಿಕಲಚೇತನ ಮಕ್ಕಳ ತಾಯಂದಿರಾದ ಜಾನಕಿ ವಾಸು ಹೂಹಾಕುವಕಲ್ಲು, ಅಮಿತಾ ಸಂತೋಷ ಕನ್ಯಾನ ಅವರನ್ನು ಪುರಸ್ಕರಿಸಲಾಗುವುದು. ಮುಡಿಪು ವಲಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿರುತ್ತಾರೆ.

ಬೆಳಗ್ಗೆ 10.30ರಿಂದ ಶಾಲೆಯ ಹಳೆ ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕಿಯರಿಗೆ, ಪೋಷಕಿಯರಿಗೆ,ಮುಡಿಪು ವಲಯದ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಅಮೃತ ಮಹೋತ್ಸವ ಸಮಿತಿಯ ಸದಸ್ಯೆಯರಿಗೆ ಮನರಂಜನಾ ಆಟಗಳು, ಸ್ಪರ್ಧೆಗಳು ನಡೆಯಲಿವೆ. ಅಪರಾಹ್ನ 1 ಗಂಟೆಗೆ ಭೋಜನ ಇರಲಿದೆ.

ಜೊತೆಗೆ ಆಕಾಶವಾಣಿ ಕಲಾವಿದೆ ಶ್ರೀಮತಿ ಮಂಜುಳಾ ರಾವ್ ನಿರ್ದೇಶನದ ಕೊಳಲು ಸಂಗೀತ ವಿದ್ಯಾಲಯ ಇರಾ ಇದರ ವಿದ್ಯಾರ್ಥಿಗಳಿಂದ ಸಂಗೀತ ಸೌರಭ ಹಾಗೂ ಭಾರತೀ ನೃತ್ಯಾಲಯದ ವಿದುಷಿ ಶ್ರೀಮತಿ ಉಮಾ ವಿಷ್ಣು ಹೆಬ್ಬಾರ್ ಇವರ ಶಿಷ್ಯೆಯರಿಂದ ಭರತನಾಟ್ಯ ನಡೆಯಲಿದೆ.

ಅಪರಾಹ್ನ 2.30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಕುಮಾರಿ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು. ಪ್ರಮುಖರಾದ ಶೈಲಜಾ ಕೆ.ಟಿ. ಭಟ್, ರಜಿಯಾ, ಪ್ರೇಮಾ ಗಟ್ಟಿ, ಶಾರದಾ ಬಿ. ಹಾಗೂ ಡಾ.ರಶ್ಮಿ ಅಮ್ಮೆಂಬಳ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತಿ ಶಾಲೆಯ ಹಳೆ ವಿದ್ಯಾರ್ಥಿನಿಯರು, ಶಿಕ್ಷಕಿಯರು, ಪೋಷಕಿಯರು ಹಾಗೂ ಶಿಕ್ಷಣಾಸಕ್ತರಿಗೆ ಮುಕ್ತ ಆಹ್ವಾನವಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ಭಟ್, ಅಮೃತ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಕುಮಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!