ಹೊಸದಿಗಂತ ವರದಿ, ವಿಜಯನಗರ:
ವಿಶ್ವಪ್ರಸಿದ್ಧ ಹಂಪಿ ಉತ್ಸವ ಹಿನ್ನೆಲೆ ಹೊಸಪೇಟೆ ನಗರದಲ್ಲಿ ಗುರುವಾರ ನಡೆದ ‘ವಿಜಯನಗರ ವಸಂತ ವೈಭವ’ ಕಲಾ ಪ್ರದರ್ಶನ ಅದ್ದೂರಿಯಾಗಿ ನಡೆಯಿತು.
ಕಲಾ ಪ್ರದರ್ಶನಕ್ಕಾಗಿ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ಕಲಾ ತಂಡಗಳು ಈ ವಸಂತ ವೈಭವ ಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ನಗರದ ಸುಪ್ರಸಿದ್ಧ ಶ್ರೀ ವಡಕರಾಯ ದೇವಸ್ಥಾನದ ಬಳಿ ಗುರುವಾರ ಸಂಜೆ ಪ್ರದರ್ಶಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು, ಪೋಷಾಕು ಧರಿಸಿ ಮೆರವಣಿಗೆಗೆ ಸಿದ್ಧರಾಗಿದ್ದರು. ನಿಗಧಿತ ಸಮಯಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ವೈಭವದ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಶ್ರೀ ಭುವನೇಶ್ವರಿ ದೇವಿಯನ್ನು ಹೊತ್ತು ವಾಹನದ ಮುಂಭಾಗದಲ್ಲಿ ಹಂಪಿಯ ಆನೆ ಲಕ್ಷ್ಮಿಯು ವಿರಾಜಮಾನವಾಗಿ ಹೆಜ್ಜೆ ಹಾಕಿ ಗಮನ ಸೆಳೆಯಿತು.
ತಾಯಿ ಭುವನೇಶ್ವರಿ ಹೊತ್ತ ತೆರೆದ ವಾಹನವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ತಾವೇ ಚಲಾಯಿಸುವ ಮೂಲಕ ಗಮನ ಸೆಳೆದರು. ಈ ವೇಳೆ ಸಚಿವರು ಸಾರ್ವಜನಿಕರತ್ತ ಕೈಬೀಸಿ ನಮಸ್ಕರಿಸಿದರು. ಅಭಿಮಾನಿಗಳು ಸಚಿವರೊಂದಿಗೆ ಜೊತೆಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಸಚಿವರಾದ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ, ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್ಪಿ ಶ್ರೀಹರಿ ಬಾಬು, ಜಿ.ಪಂ.ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಅಪರ ಜಿಲ್ಲಾಧಿಕಾರಿ ಅನುರಾಧ ಕೆ. ಹಾಗೂ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಅವರು ಹೆಜ್ಜೆ ಹಾಕಿದರು.
ನಗರದ ವಡಕರಾಯ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಕಂಸಾಳೆ, ಮರಗಾಲು ಕುಣಿತ, ಕಂಸಾಳೆ ನೃತ್ಯ, ಮಹಿಳಾ ಪಟಕುಣಿತ, ಸಿಂಧೋಳ ಕುಣಿತ, ನಂದಿಕೋಲು, ಮಹಿಳಾ ಉರುಮೆವಾದ್ಯ, ವೀರಗಾಸೆ, ಹುಲಿವೇಷ, ಚಂಡೆವಾದನ, ಕಥಕ್ಕಳಿ, ಮಯೂರ ನೃತ್ಯಂ, ಪಂಜಾಬಿ ಡೋಲ್, ಗೊರವರ ಕುಣಿತ ಸೇರಿದಂತೆ ಒಟ್ಟು 100 ಕಲಾತಂಡಗಳು ಭಾಗವಹಿಸಿ ಗಮನಸೆಳೆದವು. ಹಂಪಿ ಉತ್ಸವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕಣ್ಮನಸೆಳೆಯಿತು.