ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮತ್ತೆ ಸುದ್ದಿಯಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪಂಚಾಯಿತಿ ಕಟ್ಟಡದ ಗೋಡೆಯಲ್ಲಿ ಅವರ ಚಿತ್ರ ರಚಿಸುವ ಮೂಲಕ ಈ ಅಕ್ಷರ ಸಂತನಿಗೆ ಹುಟ್ಟೂರಿನಲ್ಲಿ ಗೌರವ ನೀಡಲಾಗಿದೆ.
ಬಾವಲಿಗುರಿ ಎಂಬಲ್ಲಿ ಶಾಸಕರ ವಿಶೇಷ ಅನುದಾನ ಹಾಗೂ ಇತರ ಅನುದಾನದಡಿ ಈ ಪಂಚಾಯತ್ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟಡದ ಒಂದು ಅಂತಸ್ತಿನ ಗೋಡೆಯಲ್ಲಿ ಪೂರ್ತಿ ಹರೇಕಳ ಹಾಜಬ್ಬ ಅವರ ಚಿತ್ರವನ್ನು ರಚಿಸಲಾಗಿದೆ.
ಕಿತ್ತಳೆ ಹಣ್ಣು ಮಾರಿ ತನ್ನೂರಿನ ಮಕ್ಕಳಿಗೆ ಶಾಲೆ ಕಟ್ಟಿಸುವಲ್ಲಿ ಶ್ರಮಿಸಿದ ಈ ಸಂತನಿಗೆ ಯಾವ ರೀತಿಯಲ್ಲಿ ಗೌರವ ಕೊಟ್ಟರೂ ಸಾಲದು. ಗ್ರಾಮದ ಸರ್ವ ಸದಸ್ಯರ ನಿರ್ಣಯದಂತೆ ಈಗ ಕಟ್ಟಡದಲ್ಲಿ ಅವರ ಚಿತ್ರ ರಚಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಆಡಳಿತ ತಿಳಿಸಿದೆ.
‘ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರದ ಕನಸು’ ಶೀರ್ಷಿಕೆಯ ಮೂಲಕ ಹರೇಕಳ ಹಾಜಬ್ಬ ಅವರನ್ನು ‘ಹೊಸದಿಗಂತ’ ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.