ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯ ಅಂಗವಾಗಿ ಆಗಸ್ಟ್ 11 ರಿಂದ 17 ರವರೆಗೆ “ಸ್ವತಂತ್ರತಾ ಸಪ್ತಾಹ” ಆಚರಿಸಲಾಗುತ್ತಿದ್ದು ಈ ಸಂದ್ರಭದಲ್ಲಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನತೆಗೆ ವಿನಂತಿಸಿದ್ದಾರೆ.
“ಹರ್ ಘರ್ ತಿರಂಗಾ” ಕಾರ್ಯಕ್ರಮದ ಭಾಗವಾಗಿ 2.68 ಕೋಟಿ ಮನೆಗಳು ಮತ್ತು 50 ಲಕ್ಷ ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸಯವಂತಾಗಬೇಕು ಎಂದು ಅವರು ಹೇಳಿದ್ದಾರೆ. ಇದರೊಂದಿಗೆ “ಸೆಲ್ಫಿ ವಿತ್ ತಿರಂಗಾ” ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ತ್ರಿವರ್ಣಧ್ವಜದೊಂದಿಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪೋಸ್ಟ್ ಮಾಡುವಂತಾಗಬೇಕು ಎಂದಿದ್ದಾರೆ.
ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ಆಚರಣೆಗಳು ಮಾರ್ಚ್ 12, 2021 ರಂದು ಪ್ರಾರಂಭವಾಯಿತು ಮತ್ತು ಇಲ್ಲಿಯವರೆಗೆ 4.5 ಕೋಟಿ ಜನರು ಭಾಗವಹಿಸಿದ 3500 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜುಲೈ 19 ಮತ್ತು 23 ರಂದು ಸ್ವಾತಂತ್ರ್ಯ ಹೋರಾಟಗಾರರಾದ ಮಂಗಲ್ ಪಾಂಡೆ ಮತ್ತು ಚಂದ್ರಶೇಖರ್ ಆಜಾದ್ ಅವರ ಜನ್ಮದಿನಗಳನ್ನು ಮತ್ತು ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಮತ್ತು ಆಗಸ್ಟ್ 9 ರಂದು ಕಾಕೋರಿ ರೈಲು ಕಾರ್ಯಾಚರಣೆಯ ವಾರ್ಷಿಕೋತ್ಸವವನ್ನು ಆಚರಿಸಲೂ ಕೂಡ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.