ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಪೊಲೀಸರ ಮೇಲೆ ಹಲ್ಲೆ ಆರೋಪ ಪ್ರಕರಣದಲ್ಲಿ ಸೋಮವಾರ ಬಂಧಿತರಾಗಿದ್ದ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರಿಗೆ ಹೈದರಾಬಾದ್ನ ನಾಂಪಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. 30 ಸಾವಿರ ರೂಪಾಯಿ ಸಮೇತ ಇಬ್ಬರ ಶ್ಯೂರಿಟಿ ಕೊಡಬೇಕು ಮತ್ತು ವಿದೇಶಕ್ಕೆ ತೆರಳುವ ವೇಳೆ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ.
ತೆಲಂಗಾಣ ಲೋಕಸೇವಾ ಆಯೋಗ (ಟಿಎಸ್ಪಿಎಸ್ಸಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸೋಮವಾರ ವಿಶೇಷ ತನಿಖಾ ತಂಡ (ಎಸ್ಐಟಿ) ಕಚೇರಿಗೆ ಶರ್ಮಿಳಾ ತೆರಳಲು ನಿರ್ಧರಿಸಿದ್ದರು. ಈ ವೇಳೆ ಪೊಲೀಸರು ಶರ್ಮಿಳಾ ಅವರನ್ನು ತಡೆದಿದ್ದರು. ಆಗ ಪೊಲೀಸರೊಂದಿಗೆ ವಾಗ್ವಾದ ನಡೆದಿತ್ತು. ಆ ವೇಳೆ ತನ್ನನ್ನು ತಡೆಯಲು ಯತ್ನಿಸಿದ ಎಸ್ಐ, ಮಹಿಳಾ ಪೇದೆ ಮೇಲೆ ಶರ್ಮಿಳಾ ಕೈ ಮಾಡಿದ್ದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು.
ಈ ಬೆನ್ನಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಶರ್ಮಿಳಾ ವಿರುದ್ಧ ಪೊಲೀಸರು ಜುಬಿಲಿ ಹಿಲ್ಸ್ ಠಾಣೆಗೆ ಕರೆದೊಯ್ದಿದ್ದರು. ಅಲ್ಲದೇ ಸೆಕ್ಷನ್ 353, 332, 509, 427 ಸೇರಿ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿ, ನಾಂಪಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಇದರಿಂದ ಶರ್ಮಿಳಾ ಅವರನ್ನು ಚಂಚಲಗುಡ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಮತ್ತೊಂದೆಡೆ, ಶರ್ಮಿಳಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಇನ್ನೊಂದೆಡೆ ಇಂದು ಬೆಳಗ್ಗೆ ಚಂಚಲಗೂಡ ಜೈಲಿನಲ್ಲಿರುವ ಶರ್ಮಿಳಾ ಅವರನ್ನು ಭೇಟಿ ಮಾಡಲು ತಾಯಿ ವೈ.ಎಸ್.ವಿಜಯಮ್ಮ ಅಲ್ಲಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಶರ್ಮಿಳಾ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಶರ್ಮಿಳಾ ಅವರಿಗೆ ಜಾಮೀನು ಸಿಗುವ ವಿಶ್ವಾಸವಿದೆ. ಜಾಮೀನು ಸಿಕ್ಕ ನಂತರವೂ ಹೋರಾಟ ಮುಂದುವರಿಸುವುದಾಗಿ ಶರ್ಮಿಳಾ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದರು.