ಹೊಸದಿಗಂತ ವರದಿ ಧಾರವಾಡ:
ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಅನೇಕ ಆಕರ್ಷಣೆಗಳನ್ನೊಳಗೊಂಡಿದೆ.
ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಕರಿಗೆ ಮೌಂಟೇನ್ ಬೈಕಿಂಗ್, ರಾಕ್ ಕ್ಲೈಂಬಿಂಗ್ ನಂತಹ ಸಾಹಸ ಕ್ರೀಡೆಗಳನ್ನು ಬೆಂಗಳೂರಿನ ಜನರಲ್ ತಿಮ್ಮಯ್ಯ ಅಡ್ವೆಂಚರಸ್ ಅಕಾಡೆಮಿ ಆಯೋಜಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮೌಂಟೆನ್ ಬೈಕಿಂಗ್ ಕೇಂದ್ರವಿದ್ದು, ಭಾಗವಹಿಸುವವರಿಗೆ ಗೇರ್ ಬೈಸಿಕಲ್ ನೀಡಲಾಗುತ್ತದೆ. ಕವಿವಿ ಸುತ್ತಮುತ್ತಲಿನ 10 ಕಿ.ಮೀ. ಕಲ್ಲು, ಗುಡ್ಡಗಾಡು ದಾರಿಯಲ್ಲಿ ಸಂಚರಿಸಿ ವಾಪಸ್ ಮರಳಬೇಕು. ಮಾರ್ಗ ಮಧ್ಯೆ ಬೇರೆ ಬೇರೆ ತಂಡಗಳೊಂದಿಗೆ ಪರಿಚಯ ಹಾಗೂ ಸ್ನೇಹ ಬೆಳೆಯಲು ಮೋಜಿನ ಆಟಗಳನ್ನು ಆಡಿಸಲಾಗುತ್ತದೆ. ಪೂರ್ತಿ ಮೌಂಟೆನ್ ಬೈಕಿಂಗ್ ಕ್ರೀಡೆಯ ಅವಧಿ 1 ಗಂಟೆ 10 ನಿಮಿಷದ್ದಾಗಿದೆ.
ಇದೇ ರೀತಿ ಕರ್ನಾಟಕ ಕಾಲೇಜು ಆವರಣದಲ್ಲಿ ರಾಕ್ ಕ್ಲೈಂಬಿಂಗ್ ಕ್ರೀಡೆ ಆಯೋಜಿಸಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರತಿನಿಧಿಗಳಿಗೆ ಹಾಗೂ ಮಧ್ಯಾಹ್ನದ ನಂತರ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಸಾಹಸ ಕ್ರೀಡೆ ಕೇಂದ್ರಗಳಲ್ಲಿ ಆಂಬುಲೆನ್ಸ್, ವೈದ್ಯಕೀಯ ತಂಡ ಕಾರ್ಯನಿರ್ವಹಿಸುತ್ತಿದೆ.