– ನಿತೀಶ ಡಂಬಳ
“ಯೇ ವಾಲಾ ತೊ ಬಹುತ ಅಚ್ಛಾ ಥಾ ಭಾಯ್. ಇತನಾ ಮಜಾ ಆಗಯಾ ಇತನಾ ಮಜಾ ಆಗಯಾ ಹಮ್ ಬಹುತ ಎಂಜಾಯ್ ಕಿಯೆ ಹೈ……” ಜಲಕ್ರೀಡೆ ಆಡಿ ಬಂದ ಉತ್ತರ ಪ್ರದೇಶದ ಅತಿಥಿಯೊಬ್ಬರ ಅನಿಸಿಕೆಯಿದು.
ಧಾರವಾಡ ನಗರದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಭಾಗವಾಗಿ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೆಲಗೇರಿ ಕೆರೆಯಲ್ಲಿ ಜಲಕ್ರೀಡೆ ಆಯೋಜಿಸಲಾಗಿದೆ. ಯುವಜನೋತ್ಸವದ ನಾಲ್ಕೂ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಜಲಕ್ರೀಡೆಗಳು ನಡೆಯುತ್ತಿವೆ.
ಕೆಕಗೇರಿಯಲ್ಲಿ 6 ಜನ ಕುಳಿತುಕೊಳ್ಳುವ ಬನಾನಾ ಬೋಟಿಂಗ್, ಸ್ಪೀಡ್ ರೈಡಿಂಗ್, ಸಿಂಗಲ್ ಸೀಟ್ ಕೈಯಾಕ್, ಡಬಲ್ ಸೀಟ್ ಕೈಯಾಕ್, ಜರ್ಬಿಂಗ್, ಝಟ್ಕಿ, 6 ಜನ ಕುಳಿತುಕೊಳ್ಳುವ ರಾಫ್ಟರ್ ಕ್ರೀಡೆಗಳು ಯುವಜನತೆಗೆ ನವೋಲ್ಲಾಸ ನೀಡಿತು. ಇದಲ್ಲದೆ ಮಕ್ಕಳಿಗಾಗಿಯೆ ವಿಶೇಷ ವಾಟರ್ ಜಾರ್ಬಿಂಗ್ ಕ್ರೀಡೆಯನ್ನೂ ಆಯೋಜಿಸಲಾಗಿದೆ. ಅನ್ಯ ರಾಜ್ಯಗಳ ಪ್ರತಿನಿಧಿಗಳು 3 ಆಟಗಳನ್ನು ಆಡಲು ಅವಕಾಶವಿದೆ ಹಾಗೂ ಸ್ಥಳೀಯರಿಗೆ ಆಟವಾಡಲು ಶುಲ್ಕ ನಿಗದಿಪಡಿಸಲಾಗಿದೆ.
ಈ ಜಲಕ್ರೀಡೆಯನ್ನು ಬೆಂಗಳೂರಿನ ಜನರಲ್ ತಿಮ್ಮಯ ಅಡ್ವೆಂಚರಸ್ ಅಕಾಡೆಮಿ ಆಯೋಜಿಸಿದೆ. ಮುಂಜಾಗ್ರತೆ ಕ್ರಮವಾಗಿ ಎಲ್ಲ ಕ್ರೀಡಾಳುಗಳಿಗೆ ಸೆಫ್ಟಿ ಜಾಕೆಟ್ ಕಡ್ಡಾಯಗೊಳಿಸಿದ್ದು, ವೈದ್ಯಕೀಯ ತಂಡವೊಂದು ಸದಾ ಕಾರ್ಯನಿರ್ವಹಿಸುತ್ತಿದೆ. ಅನ್ಯ ರಾಜ್ಯಗಳ ಅತಿಥಿಗಳು ಹಾಗೂ ಸ್ಥಳೀಯರು ಸುಡು ಬಿಸಿಲಿನಲ್ಲಿ ಕೆಲಗೇರಿ ನೀರಲ್ಲಿ ಈಜಾಡಿ ಅತ್ಯಂತ ಸಂತಸಪಟ್ಟರು.