ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರ್ ನಗರದಲ್ಲಿ ನಟ-ರಾಜಕಾರಣಿ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಸಂಚಲನ ಸೃಷ್ಟಿಸಿದ್ದು, ಹಲವರು ಕಂಬನಿ ಮಿಡಿದಿದ್ದಾರೆ.
ಈ ಮಧ್ಯೆ ಕನ್ನಡದ ಹೊಂಬಾಳೆ ಫಿಲ್ಮ್ಸ್ ಮುಖ್ಯ ನಿರ್ಧಾರ ತೆಗೆದುಕೊಂಡಿದ್ದು, ಸೆಪ್ಟೆಂಬರ್ 30ರಂದು ಚೆನ್ನೈಯಲ್ಲಿ ಆಯೋಜಿಸಿರುವ ʼಕಾಂತಾರ: ಚಾಪ್ಟರ್ 1′ ಚಿತ್ರದ ಪ್ರಮೋಷನ್ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಜತೆಗೆ ಕರೂರು ದುರಂತದಲ್ಲಿ ಮೃತಪಟ್ಟವರ ದುಃಖಕ್ಕೆ ಸ್ಪಂದಿಸಿದೆ.
ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು,ʼಇತ್ತೀಚೆಗೆ ನಡೆದ ಆಘಾತಕಾರಿ ಘಟನೆಯಿಂದ ತೀವ್ರ ದುಃಖವಾಗಿದ್ದು, ಚೆನ್ನೈಯಲ್ಲಿ ನಾಳೆ ನಿಗದಿಯಾಗಿದ್ದ ʼಕಾಂತಾರ: ಚಾಪ್ಟರ್ 1ʼ ಪ್ರಮೋಷನ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಸಂತ್ರಸ್ತರ ನೋವಿನಲ್ಲೂ ನಾವು ಭಾಗಿಯಾಗುತ್ತೇವೆ. ಅವರಿಗಾಗಿ ಪ್ರಾರ್ಥಿಸುತ್ತೇವೆ. ತಮಿಳುನಾಡಿನ ಪ್ರೇಕ್ಷಕರನ್ನು ಸರಿಯಾದ ಸಮಯದಲ್ಲಿ ಭೇಟಿಯಾಗುತ್ತೇವೆʼ ಎಂದು ಹೇಳಿದೆ.