July 22, 2026
Wednesday, July 22, 2026
spot_img
Home Blog

2028ರೊಳಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ: ರಾಮಲಿಂಗಾರೆಡ್ಡಿ ಘೋಷಣೆ!

ಹೊಸದಿಗಂತ ವರದಿ ವಿಜಯಪುರ:

ವಿಜಯಪುರ: 2028 ರೊಳಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ  ಎಂದು ಬೃಹತ್ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ರಾಜ್ಯದ ನೀರಾವರಿ ಯೋಜನೆ ಬಗ್ಗೆ ಜಿಲ್ಲೆಯ ಆಲಮಟ್ಟಿಯಲ್ಲಿ ಹೇಳಿಕೆ ನೀಡಿದ ಅವರು, ನಾನು, ಸಿಎಂ, ಮಹಾದಾಯಿ, ಮೇಕೆದಾಟು, ಯುಕೆಪಿ, ಭದ್ರಾ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ‌ ಎಂದರು.

ಹಿಂದೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಅಂದಿದ್ದರು. 5300 ಕೋಟಿ ಕೊಟ್ಟಿಲ್ಲ ಅದರ ಬಗ್ಗೆಯೂ ಜ್ಞಾಪಿಸಿದ್ದೇವೆ. 5300 ಕೋಟಿ ಒಟ್ಟಿಗೆ ಕೊಡದಿದ್ದರೂ ಹಂತ ಹಂತವಾಗಿ ಕೊಡಿ ಎಂದಿದ್ದೇವೆ. ಎತ್ತಿನಹೊಳೆ ಯೋಜನೆ ನಮ್ಮ ಅವಧಿಯಲ್ಲಿ ಮುಗಿದು ಹೋಗುತ್ತೆ ಎಂದರು.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಕೃಷ್ಣಾ ನೀರು ಹಂಚಿಕೆ ಬಗ್ಗೆ ಕೋರ್ಟ್ ಮೊರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಂಧ್ರ ತೆಲಂಗಾಣ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ಒಂದು ಕಡೆ ಕಾನೂನು ಹೋರಾಟ ಇರುತ್ತೆ, ಇನ್ನೊಂದೆಡೆ ಕೇಂದ್ರ ಜಲಶಕ್ತಿ ಮಂತ್ರಿಗಳ ಮಧ್ಯಸ್ಥಿಕೆ ವಹಿಸಲಿ‌‌. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದವರನ್ನು ಕರೆಯಲಿ ಎಂದರು.

ಸುಪ್ರೀಂಕೋರ್ಟ್ ಗೆ ಬೇಗ ಇತ್ಯರ್ಥ ಮಾಡಿ ಎಂದು ಕರ್ನಾಟಕದಿಂದ ಕೇಸ್ ಹಾಕಿಕೊಂಡಿದ್ದೇವೆ. ಸುಪ್ರೀಂಕೋರ್ಟ್ ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಇದನ್ನೂ ಓದಿ:

ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಗೆ ಯುಕೆಪಿ ಯೋಜನೆ ಅಸ್ತ್ರ, ಯೋಜನೆ ಜಾರಿಯಾಗದ ವಿಚಾರಕ್ಕೆ, ಸುಪ್ರೀಂಕೋರ್ಟ್ ಗೆ ಹೋಗಿರಲಿಲ್ಲ. ಮೊದಲು ಆಂಧ್ರ, ತೆಲಂಗಾಣ ಹೋಗಿದ್ದಾರೆ. 2050 ಕ್ಕೆ ಮುಗಿದು ಹೋಗುತ್ತೆ, ಬೇಗ ನೋಟೀಫಿಕೇಶನ್ ಮಾಡಿ ಎಂದು ಸುಪ್ರೀಂಕೋರ್ಟ್ ಗೆ ಒತ್ತಾಯ ಮಾಡ್ತಿದ್ದೇವೆ. ಮೂರು ರಾಜ್ಯಗಳಿಗೆ ನಷ್ಟ ಆಗುತ್ತೆ. ನಾವು ಅವರು ಅರೆತುಕೊಂಡು ಹೋದ್ರೆ, ಎಲ್ಲರಿಗೂ, ರೈತರಿಗೂ ಒಳ್ಳೆಯದಾಗುತ್ತದೆ ಎಂದರು.

ಯುಕೆಪಿ ಯೋಜನೆ ಹಂತ -3ಕ್ಕೆ ಭೂಸ್ವಾಧೀನ, ಪರಿಹಾರ ವಿಚಾರಕ್ಕೆ, ನವ್ಹೆಂಬರ್ ತಿಂಗಳಲ್ಲಿ ಅಂದಿನ ಸಿಎಂ, ಡಿಸಿಎಂ ಹೇಳಿದ್ದಾರೆ. ಈ ಸಲ ಬಜೆಟ್ ನಲ್ಲಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ. ಮೂರು ವರ್ಷದೊಳಗೆ ಭೂಸ್ವಾಧೀನ ಮುಗಿಯಬೇಕು. ಯುಕೆಪಿ ಯೋಜನೆಗೆ 70 ಸಾವಿರ ಕೋಟಿ ಬೇಕಾಗುತ್ತದೆ ಎಂದರು.

ಕುಂದಾನಗರಿಯಲ್ಲಿ ಜಿಟಿ ಜಿಟಿ ಮಳೆ: ಅಸ್ತವ್ಯಸ್ತಗೊಂಡ ಜನಜೀವನ, ನದಿಗಳಿಗೆ ಹೆಚ್ಚಿದ ಒಳಹರಿವು

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ಗಡಿ ಜಿಲ್ಲೆ ಸುವರ್ಣವಿಧಾನ ಸೌಧವನ್ನು ಹೊತ್ತಿರುವ ಕುಂದಾನಗರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಜಿಟಿ ಜಿಟಿ “ತಂತುರು” ಮಳೆ ನಿರಂತರವಾಗಿ ಸುರಿಯುತ್ತಿದ್ದು, ಸಾರ್ವಜನಿಕರ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ಎರಡು ದಿನಗಳಿಂದ ಆರಂಭವಾದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ತೇವಗೊಂಡಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಗಿದೆ.

ನಿರಂತರ ಮಳೆಯಿಂದಾಗಿ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕಚೇರಿಗಳಿಗೆ ತೆರಳುವ ಉದ್ಯೋಗಿಗಳು ಪರದಾಡುವಂತಾಗಿದೆ.  ಮಾರುಕಟ್ಟೆ ಪ್ರದೇಶಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ತರಕಾರಿ, ಹಣ್ಣು ಹಾಗೂ ಸಣ್ಣ ವ್ಯಾಪಾರಿಗಳ ವಹಿವಾಟಿನ ಮೇಲೂ ಮಳೆಯ ಪರಿಣಾಮ ಕಂಡುಬಂದಿದೆ.

ತಂಪಾದ ಗಾಳಿ ಮತ್ತು ಹನಿ ಮಳೆಯ ನಡುವೆಯೇ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ನಗರದ ಹಲವು ರಸ್ತೆಗಳಲ್ಲಿ ನೀರು ಮತ್ತು ಕೆಸರು ಸಂಗ್ರಹವಾಗಿದ್ದರಿಂದ ವಾಹನ ಚಾಲಕರು ಎಚ್ಚರಿಕೆಯಿಂದ ತಮ್ಮ ವಾಹನಗಳನ್ನು ನಿದಾನವಾಗಿ  ಚಲಾಯಿಸುತ್ತಿದ್ದಾರೆ.

ಸಾರ್ವಜನಿಕರು ಕೊಡೆ ಹಾಗೂ ರೈನ್‌ಕೋಟ್‌ಗಳನ್ನು ಧರಿಸಿಕೊಂಡೇ ತಮ್ಮ ದೈನಂದಿನ ಕಾರ್ಯಗಳಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇದನ್ನೂ ಓದಿ:

ಅಲ್ಲದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ  ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಜೀವನಾಡಿಗಳಾದ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಏರಿಕೆ ಕಂಡುಬಂದಿದ್ದು, ನದಿ ತೀರದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮುಂದಿನ ಕೆಲವು ದಿನಗಳ ಕಾಲ ಜಿಲ್ಲೆಯಾದ್ಯಂತ ಇದೇ ರೀತಿಯ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಟ್ಟಾರೆಯಾಗಿ ರೈತಾಪಿ ವರ್ಗ ಸೇರಿದಂತೆ ಜನ ಜಾನುವಾರು ಗಳು ಬರಗಾಲದಿಂದ ತತ್ತರಿಸುತ್ತಿರುವ ವೇಳೆ ಮಳೆರಾಯ ಕೈಹಿಡಿದು ಮರು ಜೀವ ನೀಡಿರುವುದು ಸತ್ಯ.

ಪರಪ್ಪನ ಅಗ್ರಹಾರಕ್ಕೆ ನಟಿ ರಕ್ಷಿತಾ, ವಿಜಯಲಕ್ಷ್ಮಿ ಭೇಟಿ: ನಟ ದರ್ಶನ್ ಆರೋಗ್ಯ ವಿಚಾರಿಸಿದ ಆಪ್ತ ಗೆಳತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ನನ್ನು ನೋಡಲು ಚಿತ್ರರಂಗದ ಆಪ್ತರು ಹಾಗೂ ಕುಟುಂಬಸ್ಥರು ಜೈಲಿನತ್ತ ಹೆಜ್ಜೆ ಇಡುತ್ತಿದ್ದಾರೆ. ಜೈಲಿನಿಂದ ಹೊರಬರಲು ನಟ ದರ್ಶನ್ ನಡೆಸಿದ ಸಾಲು ಸಾಲು ಜಾಮೀನು ಪ್ರಯತ್ನಗಳು ವ್ಯರ್ಥವಾಗಿರುವ ಬೆನ್ನಲ್ಲೇ, ಇಂದು ನಟಿ ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾರಾಗೃಹಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ದರ್ಶನ್ ಸುದೀರ್ಘ ವರ್ಷಗಳ ಆಪ್ತ ಗೆಳತಿಯಾಗಿರುವ ನಟಿ ರಕ್ಷಿತಾ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಮಧ್ಯಾಹ್ನ ನಟಿ ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಎರಡು ಪ್ರತ್ಯೇಕ ಕಾರುಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನ ಆವರಣಕ್ಕೆ ಆಗಮಿಸಿದರು. ಜೈಲಿನ ನಿಯಮಾವಳಿಗಳ ಪ್ರಕಾರವೇ ಇಬ್ಬರಿಗೂ ಮುಲಾಕಾತ್ ಕೋಣೆಯಲ್ಲಿ ದರ್ಶನ್‌ನನ್ನು ಭೇಟಿಯಾಗಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದರು.

ಆಪ್ತ ಸ್ನೇಹಿತರ ಭಾವುಕ ಕ್ಷಣ:

ನಟ ದರ್ಶನ್ ಮತ್ತು ರಕ್ಷಿತಾ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ವರ್ಷಗಳ ಸುದೀರ್ಘ ಸ್ನೇಹವಿದೆ. ‘ಕಲಾಸಿಪಾಳ್ಯ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದ ಈ ಹಳೇ ಗೆಳೆಯರು ಜೈಲಿನ ಕೋಣೆಯಲ್ಲಿ ಮುಖಾಮುಖಿಯಾದಾಗ ಕೆಲಕಾಲ ಭಾವುಕರಾದರು ಎನ್ನಲಾಗಿದೆ.

ಜಾಮೀನು ಹಿನ್ನಡೆ ಕುರಿತು ಚರ್ಚೆ:

ದರ್ಶನ್‌ನನ್ನು ಜೈಲಿನಿಂದ ಹೊರತರಲು ಕಾನೂನು ತಂಡ ನಡೆಸಿದ ಎಲ್ಲಾ ಪ್ರಯತ್ನಗಳೂ ಸದ್ಯಕ್ಕೆ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಹಾದಿ ಹೇಗಿರಬೇಕು ಹಾಗೂ ಸದ್ಯದ ದರ್ಶನ್ ಮಾನಸಿಕ ಸ್ಥಿತಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಪತ್ನಿ ವಿಜಯಲಕ್ಷ್ಮಿ ಮತ್ತು ರಕ್ಷಿತಾ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ:

ಜೈಲಿನಲ್ಲಿ ದರ್ಶನ್ ಜತೆ ನಿಗದಿತ ಸಮಯದವರೆಗೆ ಮಾತುಕತೆ ನಡೆಸಿದ ಬಳಿಕ ಹೊರಬಂದ ನಟಿ ರಕ್ಷಿತಾ ಪ್ರೇಮ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡದೆ ಮೌನವಾಗಿ ಜೈಲಿನ ಆವರಣದಿಂದ ಕಾರಿನಲ್ಲಿ ನಿರ್ಗಮಿಸಿದ್ಧಾರೆ..

ರಾಹುಲ್ ಗಾಂಧಿಯನ್ನು ಹೊತ್ತುಕೊಂಡೇ ಹೋದ ದೆಹಲಿ ಪೊಲೀಸ್: ಪಿಎಂ ನಿವಾಸದ ಎದುರು ಹೈ-ಡ್ರಾಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ದಿಢೀರ್ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ದೆಹಲಿ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.

ಇಂದು ರಾತ್ರಿಯಿಡೀ ಪ್ರಧಾನಿ ನಿವಾಸದ ಹೊರಗೆ ಧರಣಿ ಮುಂದುವರಿಸುವುದಾಗಿ ವಿರೋಧ ಪಕ್ಷಗಳ ನಾಯಕರು ಘೋಷಿಸಿದ್ದರು. ಆದರೆ, ಹೈ-ಸೆಕ್ಯೂರಿಟಿ ವಲಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಸಂಜೆ ವೇಳೆ ಭಾರಿ ಕಾರ್ಯಾಚರಣೆ ನಡೆಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.

ರಸ್ತೆಯಲ್ಲೇ ಕುಳಿತ ರಾಹುಲ್:

ಇಂದು ಸಂಜೆ ಸುಮಾರು 6:40ರ ವೇಳೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಆರಂಭಿಸಿದರು. ಆದರೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ರಸ್ತೆಯ ಮೇಲೆಯೇ ಕುಳಿತು, ತಮ್ಮ ಬೇಡಿಕೆಗಳು ಈಡೇರುವವರೆಗೂ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಹೊತ್ತುಕೊಂಡು ಹೋದ ಪೊಲೀಸರು:

ಸ್ಥಳದಿಂದ ಕದಲದ ರಾಹುಲ್ ಗಾಂಧಿ ಅವರನ್ನು 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸುತ್ತುವರಿದು, ಬಲವಂತವಾಗಿ ರಸ್ತೆಯಿಂದ ಮೇಲಕ್ಕೆ ಎತ್ತಿ, ಹೊತ್ತುಕೊಂಡೇ ಹೋಗಿ ಪೊಲೀಸ್ ಬಸ್ ಹತ್ತಿಸಿದ ದೃಶ್ಯಗಳು ರಾಜಧಾನಿಯಲ್ಲಿ ತೀವ್ರ ಸಂಚಲನ ಮೂಡಿಸಿವೆ. ರಾಹುಲ್ ಜೊತೆಗೆ ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಇಂಡಿಯಾ’ ಒಕ್ಕೂಟದ ತೀವ್ರ ಆಕ್ರೋಶ:

 ಪೊಲೀಸರ ಈ ಬಲವಂತದ ಕ್ರಮವನ್ನು ಕಾಂಗ್ರೆಸ್ ಹಾಗೂ ‘ಇಂಡಿಯಾ’ ಒಕ್ಕೂಟದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. “ದೇಶದ ಯುವಜನರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಮೋದಿ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳನ್ನು ಅನುಸರಿಸುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:

ಸೋಮವಾರ ನೀಟ್ ಅಕ್ರಮದ ವಿರುದ್ಧ ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಹಾಗೂ ಲಾಠಿಚಾರ್ಜ್‌ಗೆ ಆಕ್ರೋಶ ವ್ಯಕ್ತಪಡಿಸಿ ಇಂದು ಮಧ್ಯಾಹ್ನದಿಂದಲೇ ಪ್ರಧಾನಿ ನಿವಾಸದ ಎದುರು ವಿಪಕ್ಷ ನಾಯಕರು ಈ ಬೃಹತ್ ಧರಣಿ ಹಮ್ಮಿಕೊಂಡಿದ್ದರು.

ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕರ ಬಂಧನ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹೀದ್ ತೆಕ್ಕಿಲ್ ಖಂಡನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿಲ್ಲಿಯ ಪ್ರಧಾನಿ ನಿವಾಸದ ಬಳಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದನ್ನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ.ಎಂ. ಶಾಹೀದ್ ತೆಕ್ಕಿಲ್ ತೀವ್ರವಾಗಿ ಖಂಡಿಸಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ, ನ್ಯಾಯ ಕೇಳಲು ಮುಂದಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ. ಇದು ಅಘೋಷಿತ ತುರ್ತುಪರಿಸ್ಥಿತಿಯನ್ನು ನೆನಪಿಸುವ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:


ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಹೊಣೆಹೊತ್ತು ಸಂಬಂಧಪಟ್ಟ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಹಾಗೂ ವಶಕ್ಕೆ ಪಡೆಯಲಾದ ಎಲ್ಲಾ ಕಾಂಗ್ರೆಸ್ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೂಡಾ ಅವರು ಒತ್ತಾಯಿಸಿದ್ದಾರೆ.

Fitness| ಬೆಳಿಗ್ಗೆ ವಾಕಿಂಗ್ ಮಾಡೋಕೆ ಟೈಮ್ ಇಲ್ವಾ? ಚಿಂತೆ ಬಿಡಿ, ರಾತ್ರಿ ನಡಿಗೆಯಿಂದಲೇ ಸಿಗುತ್ತೆ ಡಬಲ್ ಲಾಭ!

ಇಂದಿನ ಧಾವಂತದ ಜೀವನಶೈಲಿಯಲ್ಲಿ ಬೆಳ್ಳಂಬೆಳಗ್ಗೆ ಎದ್ದು ವಾಕ್ ಮಾಡಲು ಎಲ್ಲರಿಗೂ ಸಮಯ ಸಿಗುವುದಿಲ್ಲ. ಅಂತಹವರು ಆರಿಸಿಕೊಳ್ಳುವ ಮತ್ತೊಂದು ಉತ್ತಮ ಆಯ್ಕೆಯೆಂದರೆ ರಾತ್ರಿ ನಡಿಗೆ. ಆದರೆ, ರಾತ್ರಿ ಊಟದ ನಂತರ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಗೊಂದಲ ಹಲವರಲ್ಲಿದೆ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಮಿತವಾಗಿ ನಡಿಗೆ ಮಾಡುವುದು ದೇಹಕ್ಕೆ ಉತ್ತಮ. ರಾತ್ರಿ ನಡಿಗೆಯಿಂದ ಸಿಗುವ ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಉತ್ತಮ ಜೀರ್ಣಕ್ರಿಯೆ:

ರಾತ್ರಿ ಊಟವಾದ ತಕ್ಷಣ ಮಲಗುವುದರಿಂದ ಗ್ಯಾಸ್, ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಊಟದ ನಂತರ 15-20 ನಿಮಿಷ ನಡೆಯುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

 ರಾತ್ರಿ ನಡಿಗೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ರಾಮಬಾಣ.

ಗಾಢವಾದ ನಿದ್ರೆ:

ದಿನವಿಡೀ ಕಾಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಪ್ರಶಾಂತಗೊಳಿಸಲು ರಾತ್ರಿ ನಡಿಗೆ ಸಹಕಾರಿ. ಇದು ರಾತ್ರಿ ನಿಶ್ಚಿಂತೆಯಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿಯಂತ್ರಣ:

ರಾತ್ರಿ ಊಟದ ನಂತರ ಕ್ಯಾಲೊರಿಗಳನ್ನು ಬರ್ನ್ ಮಾಡಲು ಇದು ಸುಲಭವಾದ ಮಾರ್ಗವಾಗಿದೆ. ಇದರಿಂದ ಬೊಜ್ಜು ಮತ್ತು ತೂಕ ಹೆಚ್ಚಾಗುವ ಸಮಸ್ಯೆ ದೂರವಾಗುತ್ತದೆ.

 ಹೃದಯದ ಆರೋಗ್ಯ:

ನಿಯಮಿತ ನಡಿಗೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಹೃದಯವನ್ನು ಆರೋಗ್ಯವಾಗಿಡುತ್ತದೆ.

ರಾತ್ರಿ ನಡಿಗೆಯನ್ನು ಹೇಗೆ ಮಾಡಬೇಕು?

ರಾತ್ರಿ ಸಮಯದಲ್ಲಿ ತುಂಬಾ ವೇಗವಾಗಿ ಓಡುವುದು ಅಥವಾ ಜಾಗಿಂಗ್ ಮಾಡುವುದು ಒಳ್ಳೆಯದಲ್ಲ. ಇದು ನಿದ್ರೆಗೆ ಭಂಗ ತರಬಹುದು. ಆದ್ದರಿಂದ ಅತ್ಯಂತ ನಿಧಾನವಾಗಿ ಹೆಜ್ಜೆ ಹಾಕಬೇಕು.

ಊಟದ ನಂತರ ಕೇವಲ 15 ರಿಂದ 30 ನಿಮಿಷಗಳ ಕಾಲ ನಡೆದರೆ ಸಾಕು. ಗಂಟೆಗಟ್ಟಲೆ ನಡೆಯುವ ಅಗತ್ಯವಿಲ್ಲ.

ಸುರಕ್ಷತೆಯ ದೃಷ್ಟಿಯಿಂದ ಚೆನ್ನಾಗಿ ಬೆಳಕಿರುವ ರಸ್ತೆಗಳು ಅಥವಾ ಮನೆಯ ಟೆರೇಸ್ (ಅಗಾಸಿ), ಕಾಂಪೌಂಡ್ ಒಳಗಡೆಯೇ ನಡೆಯುವುದು ಉತ್ತಮ.

ಕುಣಿಗಲ್‌ನಲ್ಲಿ ಬಯಲಾಯ್ತು ಜೀತ ಪದ್ಧತಿ: ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ, 14 ಮಂದಿ ರಕ್ಷಣೆ!

ಹೊಸದಿಗಂತ ವರದಿ ತುಮಕೂರು:

ತುಮಕೂರು: ದಲಿತರನ್ನು ಜೀತ ಕಾರ್ಮಿಕರನ್ನಾಗಿ ದುಡಿಸಿ ಕೊಳ್ಳುತ್ತಿದ್ದ ಕಲ್ಲು ಗಣಿಗಾರಿಕೆಯ ಮೇಲೆ ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿಗಳ ಹಾಗೂ ತಹಶಿಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಜೀತ ಕಾರ್ಮಿಕ ರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಮೂಲದ ಆರ್‌ಎಸ್‌ ಗ್ರಾಮದ ಭಾಗ್ಯ, ಅದ್ ಮುಗಂ, ರಾಮಮ್ಮ, ಕೃಷ್ಣ, ಮಂಜುಳಾ, ಸರೋಜಾ, ಪಳನಿ, ಪುರುಷೋತ್ತಮ, ಚೆಲುವ, ಸರಸ್ವತಿ, ಪವಿತ್ರ, ಸೌಮ್ಯ, ಇಬ್ಬರು ಮಕ್ಕಳು ಸೇರಿದಂತೆ 14 ಮಂದಿ ರಕ್ಷಣೆ ಗೊಳಗಾದ ಜೀತ ಕಾರ್ಮಿಕರಾಗಿದ್ದಾರೆ.

ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ಪಾವಸಂದ್ರ ಗ್ರಾಮದ ಸರ್ವೆ ನಂಬರ್ 34 ಸರ್ಕಾರಿ ಗೋಮಾಳ ದಲ್ಲಿ ಚೆನ್ನೇಗೌಡ ಮತ್ತು ಶಶಿ ಎಂಬುವರು ಕ್ರಷರ್ ನಡೆಸುತ್ತಿದ್ದು, ಇವರಿಗೆ ಮುಂಗಡ ವಾಗಿ ಇಂತಿಷ್ಟು ಹಣ ನೀಡಿ ಶೆಡ್ ಗಳನ್ನ ಕಟ್ಟಿಕೊಟ್ಟು ಇವರ ವಂಶಸ್ಥರಿಂದಲೂ ಸುಮಾರು 25 ವರ್ಷಗಳಿಂದ ಬಡ್ಡಿಗೆ ಬಡ್ಡಿ ಹಾಕಿ  ಬೇರೆ ಕಡೆ ಕೆಲಸಕ್ಕೆ ಹೋಗಲು ಬಿಡದಂತೆ ಮತ್ತು ಊರಿಗೂ ಹೋಗಲು ಬಡದಂತೆ ಚಿತ್ರಹಿಂಸೆ ನೀಡುತ್ತಾ ಬಂಧಿಯಾಗಿ ಇಟ್ಟುಕೊಂಡು ಜೀತದಾಳಗಳನ್ನಾಗಿ ದುಡಿಸಿಕೊಳ್ಳುತ್ತಿದ್ದರು.

ಇದರಲ್ಲಿ ಕೆಲವರು ಬೆಂಗಳೂರಿನ ಮುಕ್ತಿ ಸೇವಾ ಸಂಸ್ಥೆಯೊಂದಿಗೆ ಕಾನೂನು ಸೇವಾ ಪ್ರಾಧಿಕಾರ ವನ್ನು ಸಂಪರ್ಕಿಸಿ ಉಪವಿಭಾಗಾ ಧಿಕಾರಿ ಗಳಿಗೆ ದೂರು ನೀಡಿ ತಮ್ಮ ನೋವನ್ನು ತೋಡಿ ಕೊಂಡಿದ್ದರು.

ಉಪ ವಿಭಾಗಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಮಧ್ಯಾಹ್ನ ಕ್ರಶರ್ ಮೇಲೆ ದಾಳಿ ನಡೆಸಿ ಜೀತ ಕಾರ್ಮಿಕರನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.‌

ಇದನ್ನೂ ಓದಿ:

ವಿಚಾರಣೆ ನಡೆಸಿದ ನಂತರ ಆರೋಪಿಗಳ ವಿರುದ್ಧ ದೂರು ನೀಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಪಯುಭಾಗಾಧಿಕಾರಿ ನಹೀದಾ ಜಮ್ ಜಮ್ ತಿಳಿಸಿದ್ದಾರೆ.

ಮಾಲೀಕರು ಕಟ್ಟಿ ಕೊಟ್ಟಿದ್ದ ಶೆಡ್ ಗಳಲ್ಲಿ ಮಲಗ ಬೇಕಾಗಿತ್ತು, ಇವರು ವಾಸಿಸುತ್ತಿದ್ದ ಶಡ್ ಗಳಲ್ಲಿ ಮೂಲಭೂತ ಸೌಕರ್ಯಗಳೇ ಇರಲಿಲ್ಲ ಬಯಲೇ ಶೌಚಾಲಯ, ಸ್ನಾನಕ್ಕೂ ಯಾವುದೇ ವ್ಯವಸ್ಥೆ ಗಳಿಲ್ಲದೆ ಪ್ರಾಣಿಗಳಂತೆ ಬದುಕುತ್ತಿದ್ದರು ಎಂದು ಮುಕ್ತಿ ಸಂಸ್ಥೆಯ ಮುಖ್ಯಸ್ಥರು ಗಳಾದ ಬೃಂದಾ ಮತ್ತು ಸೌಮ್ಯ ತಿಳಿಸಿದ್ದಾರೆ

ಉಪ ವಿಭಾಗಾಧಿಕಾರಿಗಳ ನೇತೃತ್ವದ ತಂಡದಲ್ಲಿ ತಹಸಿಲ್ದಾರ್ ಕರಿಯ ನಾಯಕ್, ಸಿ ಡಿ ಪಿ ಒ ಕಮಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಕಾರ್ಮಿಕ ನಿರೀಕ್ಷಕ ಪುರುಷೋತ್ತಮ್, ಪಿ ಎಸ್ ಐ ಶ್ರೀನಿವಾಸ್ ಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಮತ್ತಿತರರು  ಇದ್ದರು.

ಅಖಿಲ್ ಜೋಯಲ್ ಮೃತದೇಹ ಆದಷ್ಟು ಬೇಗ ಊರಿಗೆ ತರಲು ಎಲ್ಲಾ ಪ್ರಯತ್ನ: ಕಾಸರಗೋಡು ಜಿಲ್ಲಾಧಿಕಾರಿ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ಕರಾವಳಿಯಲ್ಲಿ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ವೆಳ್ಳರಿಕುಂಡು ಎಕೆಜಿ ನಗರದ ಅಖಿಲ್ ಜೋಯಲ್ ಅವರ ಮನೆಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಮಂಗಳವಾರ ಭೇಟಿ ನೀಡಿದ್ದು, ಮೃತದೇಹವನ್ನು ಆದಷ್ಟು ಬೇಗ ಊರಿಗೆ ತರಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದೇ ಸಂದರ್ಭ ಅಖಿಲ್ ಅವರ ಪೋಷಕರಾದ ವಾಲಿಪ್ಲಾಕಲ್ ಜೋಯ್ ಮತ್ತು ಸಾಲಿ ಹಾಗೂ ಇತರ ಸಂಬಂಧಿಕರಿಗೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿದರು.

ಕೇಂದ್ರ ವಿದೇಶಾಂಗ ಸಚಿವಾಲಯವು ಅಖಿಲ್ ಸಾವನ್ನು ದೃಢೀಕರಿಸಿವ ಸಂದೇಶವನ್ನು ಕಳುಹಿಸಿದೆ ಮತ್ತು ರಾಜ್ಯ ಸರಕಾರ ಹಾಗೂ ನಾರ್ಕಾ ಸಾಧ್ಯವಾದಷ್ಟು ಬೇಗ ಮೃತದೇಹವನ್ನು ಊರಿಗೆ ತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅರ್ಜುನ್ ಪಾಂಡ್ಯನ್ ಅವರು ಹೆತ್ತವರಿಗೆ ತಿಳಿಸಿದರು.

ಇದನ್ನೂ ಓದಿ:

ಭಾರತೀಯ ರಾಯಭಾರ ಕಚೇರಿಗೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯನ್ನು ಸಂಬಂಧಿಕರಿಗೆ ಸಾಧ್ಯವಾದಷ್ಟು ಬೇಗ ಒದಗಿಸಲಾಗುವುದು. ಅಖಿಲ್ ಜೋಯಲ್ ಅವರ ಮೃತದೇಹವನ್ನು ವಿಮಾನದ ಮೂಲಕ ದೇಶಕ್ಕೆ ಮತ್ತು ನಂತರ ಅವರ ಮನೆಗೆ ತರಲು ಸರಕಾರವು ಎಲ್ಲಾ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅಖಿಲ್ ಅವರ ಕುಟುಂಬಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತವು ರಾಜ್ಯ ಸರಕಾರದೊಂದಿಗೆ ಸಂಪೂರ್ಣ ಸಹಕಾರವನ್ನು ಖಚಿತಪಡಿಸುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಂತ್ರಾಲಯದಲ್ಲಿ ಭೀಕರ ರಸ್ತೆ ಅಪಘಾತ: ಹಾಫ್‌ಕಾಮ್ಸ್‌ನ ಪ್ರಧಾನ ವ್ಯವಸ್ಥಾಪಕ ರವಿ ಶೆಟ್ಟಿ ಮೃ*ತ್ಯು

0

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರಿನ ಹಾಫ್‌ಕಾಮ್ಸ್‌ನ ಪ್ರಧಾನ ವ್ಯವಸ್ಥಾಪಕ ರವಿಶೆಟ್ಟಿ (೪೩) ಸಾವನ್ನಪ್ಪಿದ್ದಾರೆ.

ಈ ಘಟನೆಯಲ್ಲಿ ಇತರೆ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಮಂಗಳೂರಿನ ಪ್ರದೀಪ್ ಆಳ್ವ, ಪುರುಷೋತ್ತಮ ಭಂಡಾರಿ, ಸಿಎ ಸುಧೇಶ್ ರೈ ಎಂದು ಗುರುತಿಸಲಾಗಿದೆ. ಸ್ಥಳೀಯರ ಸಹಕಾರದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿ ಶೆಟ್ಟಿ ಅವರು ಈ ಮೂವರೊಂದಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿಯ ದರುಶನಕ್ಕೆ ತೆರಳಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.

ಇದನ್ನೂ ಓದಿ:



ರವಿ ಶೆಟ್ಟಿ ಅವರು ಯಕ್ಷಧ್ರುವ ಪಟ್ಲ ಇದರ ಜೊತೆ ಕಾರ್ಯದರ್ಶಿ, ಉರ್ವ ಬಂಟರ ಸಂಘದ ಅಧ್ಯಕ್ಷರಾಗಿ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಆಗಲಿದ್ದಾರೆ.

ಉಕ್ರೇನ್ ದುರಂತ । ಬೆಳಿಗ್ಗೆಯಷ್ಟೇ ಮನೆಯವರಿಗೆ ಕರೆಮಾಡಿ ‘ಎಲ್ಲವೂ ಚೆನ್ನಾಗಿದೆ’ ಎಂದಿದ್ದ ಅಚಲ್ ಜೋಯೆಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ಬಂದರಿನ ಮೇಲೆ ರಷ್ಯಾ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ ಕಾಸರಗೋಡಿನ ನಿವಾಸಿ ಅಚಲ್ ಜೋಯೆಲ್ ಘಟನೆ ನಡೆದ ದಿನವೂ ಎಂದಿನಂತೆ ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು.

‘ಎಲ್ಲವೂ ಚೆನ್ನಾಗಿದೆ’ ಎಂದು ತಂದೆ-ತಾಯಿಗೆ ಧೈರ್ಯ ತುಂಬಿದ್ದ ಮಗನ ಧ್ವನಿ ಕೇಳಿ ಕುಟುಂಬವೂ ನೆಮ್ಮದಿಯಾಗಿತ್ತು. ಆದರೆ ಆ ನೆಮ್ಮದಿ ಕೆಲವೇ ಗಂಟೆಗಳಷ್ಟೇ ಉಳಿಯಿತು. ಮಧ್ಯಾಹ್ನದ ವೇಳೆಗೆ ಉಕ್ರೇನ್ ಸಮುದ್ರ ತೀರದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಅಚಲ್ ಮೃತಪಟ್ಟಿರುವ ಸುದ್ದಿ ತಲುಪುತ್ತಿದ್ದಂತೆ ಮನೆಮಂದಿ ಶೋಕಸಾಗರದಲ್ಲಿ ಮುಳುಗಿದರು.

ಮಗನ ಸಾವಿನ ಸುದ್ದಿ ಕೇಳಿದ ತಾಯಿ ಸಾಲಿ ತೀವ್ರ ಆಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಮಗನ ಮದುವೆ ನೋಡಬೇಕೆಂಬ ಕನಸು ಕಂಡಿದ್ದ ಕುಟುಂಬಕ್ಕೆ ವಿಧಿಯೇ ಕ್ರೂರ ಆಘಾತ ನೀಡಿದಂತಾಗಿದೆ.

ಚೆನ್ನೈನ ಮೆರೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮರ್ಚೆಂಟ್ ನೇವಿಗೆ ಸೇರಿದ್ದ ಅಚಲ್, ಕುಟುಂಬದ ಹೆಮ್ಮೆಯಾಗಿದ್ದರು. ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್‌ಮನ್ ಆಗಿರುವ ತಂದೆ ಮತ್ತು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ತಾಯಿ ತಮ್ಮ ಮಗನ ಯಶಸ್ಸಿನ ಬಗ್ಗೆ ಸದಾ ಹೆಮ್ಮೆಪಡುತ್ತಿದ್ದರು. ಇದೀಗ ಅದೇ ಮನೆಯೊಳಗೆ ಮದುವೆಯ ಸಿದ್ಧತೆಗಳ ಬದಲು ಅಂತ್ಯಸಂಸ್ಕಾರದ ದುಃಖ ಆವರಿಸಿದೆ.

ಇದನ್ನೂ ಓದಿ;

ಭಾರತದ ತೀವ್ರ ಆಕ್ರೋಶ

ವಾಣಿಜ್ಯ ಹಡಗನ್ನು ಗುರಿಯಾಗಿಸಿ ನಡೆದ ಈ ಕ್ಷಿಪಣಿ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ನಿರಪರಾಧ ನಾಗರಿಕರ ಜೀವಕ್ಕೆ ಅಪಾಯ ಉಂಟುಮಾಡುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರ ಮತ್ತು ಹಡಗು ಸಂಚಾರದ ಸುರಕ್ಷತೆಗೆ ಧಕ್ಕೆ ತರುವ ಇಂತಹ ದಾಳಿಗಳು ಸಂಪೂರ್ಣ ಅಸ್ವೀಕಾರಾರ್ಹ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಿ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಬೇಕೆಂದು ಭಾರತ ಒತ್ತಾಯಿಸಿದೆ.

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !