ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ನಗರದಲ್ಲಿ ಹಲವೆಡೆ ನೀರು ನಿಂತಿದ್ದು, ದೈನಂದಿನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ನಗರದಲ್ಲಿ ಪ್ರಮುಖ ರಸ್ತೆಗಳು ಜಲಾವೃತಗೊಂಡ ಪರಿಣಾಮ ವಾಹನ ಸಂಚಾರ ನಿಧಾನಗೊಂಡಿದೆ. ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.
ವೀರಸಂದ್ರ ಬಳಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯೇ ಮಳೆ ನೀರಿನಿಂದ ಜಲಾವೃತಗೊಂಡಿದೆ. ಇದರಿಂದಾಗಿ ವಾಹನ ಸಂಚಾಲಕರು ತೀವ್ರ ತೊಂದರೆ ಅನುಭವಿಸಿದ್ದು, ಹಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆ ನೀರು ಸರಿಯಾಗಿ ಹೊರಹೋಗುವ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಮೈಸೂರು ರಸ್ತೆ, ಗುಡ್ಡದಹಳ್ಳಿ ಜಂಕ್ಷನ್, ಕೆಂಗೇರಿ, ಬಿಳೇಕಲ್ಲಳ್ಳಿ ಸಿಗ್ನಲ್, ಜಿ.ಡಿ.ಮರ ಸಿಗ್ನಲ್, ಸಾಗರ್ ಜಂಕ್ಷನ್, ಡೈರಿ ಸಿಗ್ನಲ್, ದೊಡ್ಡ ಮರ, ಚೊಕ್ಕಸಂದ್ರ, ರಾಯಸಂದ್ರ ಸೇರಿ ಅನೇಕ ರಸ್ತೆಗಳು ಮಳೆ ನೀರಿನಿಂದ ತುಂಬಿಕೊಂಡಿವೆ. ಈ ಪ್ರದೇಶಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.
ಬೆಂಗಳೂರು ಸಂಚಾರ ಪೊಲೀಸರು ಮೈಸೂರು ರಸ್ತೆ, ಗುಡ್ಡದಹಳ್ಳಿ ಜಂಕ್ಷನ್, ಕೆಂಗೇರಿ, ಬಿಳೇಕಲ್ಲಳ್ಳಿ ಸಿಗ್ನಲ್, ಜಿ.ಡಿ.ಮರ ಸಿಗ್ನಲ್ ಮಾರ್ಗಗಳಲ್ಲಿ ನೀರು ನಿಂತಿರುವುದರಿಂದ ಸಂಚಾರ ನಿಧಾನಗತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ವಾಹನ ಚಾಲಕರು ಮುಂಜಾಗ್ರತೆ ವಹಿಸಿ ಸಂಚಾರ ನಡೆಸುವಂತೆ ಮನವಿ ಮಾಡಲಾಗಿದೆ.