Tuesday, November 4, 2025

ಲಾಲ್‌ಬಾಗ್ ಹಾಳು ಮಾಡೋಕೆ ನಾನು ಮೂರ್ಖ ಅಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಗರಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟನಲ್ ವಿರೋಧಿಸಿ ಬಿಜೆಪಿಯ ಸಹಿ ಸಂಗ್ರಹ ಅಭಿಯಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದು, ಲಾಲ್‌ಬಾಗ್ ಹಾಳು ಮಾಡೋದಕ್ಕೆ ನಾನು ಮೂರ್ಖ ಅಲ್ಲ. ನನಗೂ ಲಾಲ್‌ಬಾಗ್ ಇತಿಹಾಸ ಗೊತ್ತಿದೆ ಎಂದು ಹೇಳಿದರು.

ಅಶೋಕ್ ಅಧ್ಯಕ್ಷತೆಯಲ್ಲೇ 1 ಸಮಿತಿ ಮಾಡುತ್ತೇವೆ. ನಾನು ಸಿದ್ಧನಿದ್ದೇನೆ, ಯರ‍್ಯಾರು ಸದಸ್ಯರು ಬೇಕು ಎಂದು ಅವರೇ ಹೇಳಲಿ. ಇದು ನನ್ನ ಆಸ್ತಿಯಲ್ಲ ಅಥವಾ ಯಾರ ಆಸ್ತಿಯೂ ಅಲ್ಲ. ಇದು ಸಾರ್ವಜನಿಕರಿಗಾಗಿ ಮಾಡುತ್ತಿರುವ ಯೋಜನೆ. ನಾನು ಎಲ್ಲಾ ಅಧ್ಯಯನ ಮಾಡಿದ್ದೇನೆ. ಲಾಲ್‌ಬಾಗ್‌ನಲ್ಲಿ ಎಷ್ಟು ಜಾಗ ಉಪಯೋಗ ಆಗ್ತಿದೆ, ಎಷ್ಟು ಉಪಯೋಗ ಆಗ್ತಿಲ್ಲ ಎಲ್ಲಾ ಗೊತ್ತಿದೆ. ಅವರು ರಾಜಕಾರಣ ಮಾಡಬೇಕು. ಅವರದ್ದು ರಾಜಕಾರಣ, ಯಾವುದೇ ಅಭಿವೃದ್ಧಿ ಬೇಕಿಲ್ಲ. ಟನಲ್ ಮಾಡಿದ್ದಕ್ಕೆ ಅಲ್ವಾ ಮೆಟ್ರೋ ಮಾಡಲು ಆಗಿದ್ದು.ಬಿಜೆಪಿಯವರು ತಂದಿದ್ದಾ ಮೆಟ್ರೋ? ದಾಖಲೆ ತೆಗೆಸಿ ನೋಡಲಿ. ಎಸ್.ಎಂ.ಕೃಷ್ಣ ಕಾಲದಲ್ಲಿ 10 ದೇಶ ತಿರುಗಿ ನಾನು ವರದಿ ಕೊಟ್ಟೆ. ಕೇಂದ್ರದಲ್ಲಿ ವಾಜಪೇಯಿ, ಅನಂತ್‌ಕುಮಾರ್‌ಗೆ ವರದಿ ಕೊಟ್ಟು ಬಂದ್ವಿ. ಜಾರ್ಜ್ ಕಾಲದಲ್ಲಿ ಸ್ಟೀಲ್ ಫ್ಲೈಓವರ್‌ಗೆ ವಿರೋಧ ಮಾಡಿದ್ರು ಎಂದು ಕಿಡಿಕಾರಿದರು.

ಎಂಪಿ ಮಾತಾಡ್ತಾ ಇದಾನೆ, ರೈಲು ಮಾಡಿ ಅಂತಾನೆ, ಎಲ್ಲಿದೆ ಜಾಗ? ಕೇಂದ್ರ ಸರ್ಕಾರ ಮಾಡಲಿ. ಟ್ರಾಯ್ ವ್ಯವಸ್ಥೆ ಮಾಡಿ ಅಂತಾರೆ, ದಿನಕ್ಕೆ 100 ಜನ ಸಾಯ್ತಾರೆ ಅಷ್ಟೇ. ಪ್ರಾಯೋಗಿಕವಾಗಿ ಅದು ಸಾಧ್ಯವಿಲ್ಲ. ಬಿಆರ್‌ಟಿಎಸ್ ಮಾಡಲು ಆಗುತ್ತಾ? ಅವನಿಗೆ ತಲೆ ಇದೆಯಾ? ಸಹಿ ಸಂಗ್ರಹ ಮಾಡ್ತಿದ್ದಾರೆ, ನನಗೂ ಕರೆ ಕೊಡೋದಕ್ಕೆ ಬರುತ್ತೆ. ಆರ್‌ಎಸ್‌ಎಸ್ ಇಲ್ಲ ಅಂದ್ರೆ ಅವರ ಪಾರ್ಟಿ ಝೀರೋ ಎಂದು ಹರಿಹಾಯ್ದರು.

ತೇಜಸ್ವಿ ಸೂರ್ಯ ದೊಡ್ಡ ಲೀಡರ್, ಬಹಳ ಬುದ್ಧಿವಂತ, ಫ್ಲೈಟ್ ಡೋರ್ ಓಪನ್ ಮಾಡ್ಬಿಟ್ಟ. ಕಾರು ಬೇಡ ಅಂತಿದ್ದ, ಆಮೇಲೆ ಮದ್ವೆ ಆಗ್ತಾ ಇದೀನಿ ಹೊಸ ಕಾರು ಬೇಕು ಅಂತಾ ಅರ್ಜಿ ಹಾಕಿದ್ದ. ಅಮೆರಿಕಕ್ಕೆ ಹೋಗಿ ಟ್ರಂಪ್ ಬಳಿ ಉಗಿಸಿಕೊಂಡ. ಅನುಮತಿ ಇಲ್ಲದೆ ಹೋಗಿ ಉಗಿಸಿಕೊಂಡು ಬಂದ. ನಿನಗ್ಯಾಕೆ ಹೊಸ ಕಾರು ಬೇಕಿತ್ತು? ನೀನು ಮೆಟ್ರೋದಲ್ಲಿ ಓಡಾಡು. ಎಲ್ಲಾ ಬಿಜೆಪಿಯವರು ಕಾರು ಬಿಟ್ಟು ಓಡಾಡಲಿ ಎಂದು ವಾಗ್ದಾಳಿ ನಡೆಸಿದರು.

error: Content is protected !!