ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರಿಗೆ ಬೆನ್ನುನೋವು ಈಗ ಮಾಯವಾಗಿದೆಯೇ ಎಂಬ ಕುತೂಹಲಕ್ಕೆ ಸಿ.ವಿ. ರಾಮನ್ ಆಸ್ಪತ್ರೆಯ ವೈದ್ಯರ ವರದಿ ಬ್ರೇಕ್ ನೀಡಿದೆ. ದರ್ಶನ್ಗೆ ಇನ್ನು ಫಿಸಿಯೊಥೆರಪಿ ಅಗತ್ಯವಿಲ್ಲ ಎಂದು ವೈದ್ಯರ ತಂಡ ಜೈಲಾಧಿಕಾರಿಗಳಿಗೆ ವರದಿ ಸಲ್ಲಿಸಿದೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.
ದರ್ಶನ್ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಜೈಲು ಸೇರಿದ್ದಾಗ, ತೀವ್ರ ಬೆನ್ನುನೋವು ಇದೆ, ನಿಲ್ಲಲು ಮತ್ತು ಕೂರಲು ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್ಗೆ ಮೊರೆ ಹೋಗಿದ್ದರು. ಆಗ ನ್ಯಾಯಾಲಯವು ಅವರಿಗೆ ವೈದ್ಯಕೀಯ ಕಾರಣಗಳ ಮೇಲೆ ಜಾಮೀನು ನೀಡಿತ್ತು.
ಎರಡನೇ ಬಾರಿ ಪರಪ್ಪನ ಅಗ್ರಹಾರಕ್ಕೆ ಬಂದಾಗಲೂ ದರ್ಶನ್ ಅದೇ ಬೆನ್ನುನೋವಿನ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಆದರೆ, ಈ ಬಾರಿ ಜಾಮೀನು ನಿರಾಕರಿಸಿದ ಕೋರ್ಟ್, ಜೈಲಿನಲ್ಲೇ ಸೂಕ್ತ ಚಿಕಿತ್ಸೆ ಪಡೆಯಲು ಅನುಮತಿ ನೀಡಿತ್ತು. ಅದರಂತೆ, ಸಿ.ವಿ. ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡವು ವಾರಕ್ಕೆ ಎರಡರಿಂದ ಮೂರು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡುತ್ತಿತ್ತು.
ಸದ್ಯ ತಪಾಸಣೆ ನಡೆಸಿದ ಬಳಿಕ ವೈದ್ಯರ ತಂಡ, ದರ್ಶನ್ಗೆ ಇನ್ನು ಮುಂದೆ ಫಿಸಿಯೋ ಅವಶ್ಯಕತೆ ಇಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದೆ. ವೈದ್ಯರ ಈ ಶಿಫಾರಸ್ಸಿನ ಆಧಾರದ ಮೇಲೆ, ಜೈಲಾಧಿಕಾರಿಗಳು ಅವರನ್ನು ಫಿಸಿಯೋಥೆರಪಿಗಾಗಿ ಕರೆದೊಯ್ಯುವುದನ್ನು ನಿಲ್ಲಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ದರ್ಶನ್ ಸಹ ಈ ಕುರಿತು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.
ಎರಡನೇ ಬಾರಿ ಜೈಲು ಸೇರಿದ ನಂತರ ದರ್ಶನ್ 10 ರಿಂದ 12 ಕೆಜಿ ತೂಕ ಕಳೆದುಕೊಂಡಿದ್ದಾರೆ. ಈ ತೂಕ ಇಳಿಕೆಯ ಪರಿಣಾಮದಿಂದ ಸಹಜವಾಗಿಯೇ ಅವರ ಬೆನ್ನುನೋವು ಶಮನವಾಗಿರಬಹುದು ಎಂದು ಜೈಲಾಧಿಕಾರಿಗಳ ಮೂಲಗಳು ಅಭಿಪ್ರಾಯಪಟ್ಟಿವೆ. ಸದ್ಯ ದರ್ಶನ್ ಜೈಲಿನಲ್ಲಿ ದಿನಕ್ಕೆ ಒಂದು ಹೊತ್ತಿನ ಊಟ ಮಾತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

