ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರ ಈಗ ಮತ್ತೊಮ್ಮೆ ಪ್ರಮುಖ ಚರ್ಚೆಯ ಕೇಂದ್ರವಾಗಿದೆ. ಹೌದು! ಮುಂದಿನ ಐಪಿಎಲ್ ಆವೃತ್ತಿಯ ಮೊದಲ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸುವ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಪ್ರಯತ್ನಗಳನ್ನು ಚುರುಕುಗೊಳಿಸಿದೆ.
ಈ ಕುರಿತು ಮಾತನಾಡಿದ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಈ ಬಗ್ಗೆ ಈಗಾಗಲೇ ಬಿಸಿಸಿಐ ಜೊತೆ ಅಧಿಕೃತ ಮಾತುಕತೆ ನಡೆದಿದ್ದು, ಬೆಂಗಳೂರಿಗೆ ಉದ್ಘಾಟನಾ ಪಂದ್ಯ ನೀಡುವ ವಿಚಾರದಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಿದ್ದಾರೆ. ಪಂದ್ಯದ ಆಯೋಜನೆಗೆ ಅಗತ್ಯವಿರುವ ಭದ್ರತೆ, ಸಂಚಾರ ನಿಯಂತ್ರಣ ಮತ್ತು ಅಭಿಮಾನಿಗಳ ನಿರ್ವಹಣೆ ಕುರಿತಂತೆ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದಲೂ ಈ ಯೋಜನೆಗೆ ಸಹಕಾರ ದೊರೆತಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಂದ್ಯಾವಳಿ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗೃಹ ಸಚಿವರ ಜೊತೆಗೂ ಸಹ ಸಮಾಲೋಚನೆ ನಡೆಸಿದ್ದು, ಯಾವುದೇ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವೆಂಕಟೇಶ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

