ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮಾರ್ಪಡಿಸಿ ‘ಜಿ-ರಾಮ್ ಜಿ’ ಬಿಲ್ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವುದೇ ಪೂರ್ವಸಿದ್ಧತೆ ಅಥವಾ ಸಮರ್ಪಕ ಚರ್ಚೆಯಿಲ್ಲದೆ ತರಾತುರಿಯಲ್ಲಿ ಈ ಬಿಲ್ ಜಾರಿಗೆ ತರಲಾಗಿದೆ. ಯೋಜನೆಯ ಹೆಸರಿನಲ್ಲಿ ‘ಗಾಂಧಿ’ ಹೆಸರಿದ್ದರೆ ಇವರಿಗೇನು ತೊಂದರೆಯಾಗಿತ್ತು? ‘ಜಿ ರಾಮ್ ಜಿ’ ಎಂದು ಹೆಸರಿಟ್ಟು ಸರ್ಕಾರ ಏನನ್ನು ಸಾಧಿಸಲು ಹೊರಟಿದೆ?” ಎಂದು ಪ್ರಶ್ನಿಸಿದರು.
ಈ ಬದಲಾವಣೆಯಿಂದಾಗಿ ದೇಶದ ಬಡ ಜನರಿಗೆ ಉದ್ಯೋಗ ಭದ್ರತೆಯ ಆತಂಕ ಎದುರಾಗಿದ್ದು, ಗ್ರಾಮೀಣ ಜನರ ಹಿತದೃಷ್ಟಿಯನ್ನು ಸರ್ಕಾರ ಬಲಿ ನೀಡುತ್ತಿದೆ ಎಂದು ಅವರು ಆರೋಪಿಸಿದರು.

