ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಜನತೆಗೆ ಗುಡ್ನ್ಯೂಸ್ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು, ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಶ್ರೀಘ್ರದಲ್ಲೇ ಶುರುವಾಗುವ ಮುನ್ಸೂಚನೆ ಇದೆ.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬಹುನಿರೀಕ್ಷಿತ ಸೆಮಿ-ಹೈಸ್ಪೀಡ್ ರೈಲು ಸೇವೆ ಕೊನೆಗೂ ಹಳಿಗೆ ಬರಲಿದೆ ಎಂಬ ಸುಳಿವು ನೀಡಿದ್ದಾರೆ. ಇದೀಗ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವ ಜನರಿಗೆ ಇದು ಆಶಾಭಾವನೆಯನ್ನು ಮೂಡಿಸಿದೆ. ವಂದೇ ಭಾರತ್ ಸೇವೆಯನ್ನು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಯೋಜಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಿಗೆ ಹೋಗುವವರಿಗೆ ಇದು ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಸಚಿವ ವಿ. ಸೋಮಣ್ಣ ಹಂಚಿಕೊಂಡಿದ್ದಾರೆ. ಈಗಾಗಲೇ ಮಂಗಳೂರು – ಬೆಂಗಳೂರು ವಂದೇ ಭಾರತ್ ಸೇವೆ ಅಂತಿಮವಾಗಿದೆ. ಕರ್ನಾಟಕದ ರಮಣೀಯ ಪಶ್ಚಿಮ ಘಟ್ಟಗಳ ಮೂಲಕ ಐಕಾನಿಕ್ ವಂದೇ ಭಾರತ್ ರೈಲುಗಳು ಶೀಘ್ರದಲ್ಲೇ ಓಡುವುದನ್ನು ಕಾಣಬಹುದು. ಮಂಗಳೂರು ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ವಂದೇ ಭಾರತ್ ರೈಲು ಓಡಾಟ ಆರಂಭಿಸುವ ಸಮಯ ಹತ್ತಿರವಾಗಿದೆ ಎಂದು ಬರೆದುಕೊಂಡಿದ್ದಾರೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿಮೀ ಘಾಟ್ ವಿಭಾಗದಲ್ಲಿ ವಿದ್ಯುದೀಕರಣ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಹೊಸ ಸೇವೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ಈ ರೈಲು ಮಾರ್ಗದಲ್ಲಿ ಸಂಪೂರ್ಣ ವಿದ್ಯುದ್ದೀಕರಣವಾಗಲಿದೆ. ಈ ರೈಲು ಕಾರ್ಯಾಚರಣೆ ಸ್ವಚ್ಛ, ತ್ವರಿತ ಮತ್ತು ಹೆಚ್ಚು ಇಂಧನ ಉಳಿತವನ್ನು ಮಾಡಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ರೈಲು ಜಾಲವನ್ನು ಬಲಪಡಿಸುತ್ತದೆ.
ಇನ್ನು ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲಿನ ದೀರ್ಘಕಾಲದ ಬೇಡಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇನ್ಫೋಸಿಸ್ನ ಮಾಜಿ ಸಿಎಫ್ಒ ಮೋಹನದಾಸ್ ಪೈ ಅವರ ಹಂಚಿಕೊಂಡಿದ್ದ ಪೋಸ್ಟ್ಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

