Thursday, October 16, 2025

ತಿರು ಓಣಂ ಹಬ್ಬದ ಸಂಭ್ರಮ: ಬೆಂಗಳೂರಿನಿಂದ ಕೇರಳದತ್ತ 90 ಹೆಚ್ಚುವರಿ KSRTC ಬಸ್‌ ಸಂಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ತಿರು ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬೆಂಗಳೂರಿನಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ 90 ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ.

ತಿರು ಓಣಂ ಹಬ್ಬವು ಸೆಪ್ಟೆಂಬರ್ 5, 2025 ರಂದು ಇರುವುದರಿಂದ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೆಪ್ಟೆಂಬರ್ 2, 2025 ರಿಂದ ಸೆಪ್ಟೆಂಬರ್ 4, 2025 ರವರೆಗೆ ಹಾಲಿ ಇರುವ ಬಸ್‌ಗಳ ಜೊತೆಗೆ ಈ ಹೆಚ್ಚುವರಿ ಬಸ್‌ಗಳು ಕಾರ್ಯನಿರ್ವಹಿಸಲಿವೆ. ನಂತರ, ಸೆಪ್ಟೆಂಬರ್ 7, 2025 ರಂದು ಕೇರಳದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕೇರಳದ ಕಣ್ಣೂರು, ಕೋಝಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಾಯಂ ಮತ್ತು ತಿರುವನಂತಪುರಂ ಸೇರಿದಂತೆ ಪ್ರಮುಖ ನಗರಗಳಿಗೆ ಬಸ್‌ಗಳು ಸಂಚರಿಸಲಿವೆ. ಪ್ರತಿಷ್ಠಿತ ಬಸ್‌ಗಳು ಶಾಂತಿನಗರದಿಂದ ಹೊರಡಲಿವೆ ಎಂದು ನಿಗಮ ತಿಳಿಸಿದೆ.

ರಿಯಾಯಿತಿ ಮತ್ತು ಮುಂಗಡ ಕಾಯ್ದಿರಿಸುವಿಕೆ:

ಪ್ರಯಾಣಿಕರು ಈ ವಿಶೇಷ ಬಸ್‌ಗಳಿಗೆ ಮುಂಗಡವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ.
ಆನ್‌ಲೈನ್‌ನಲ್ಲಿ www.ksrtc.karnataka.gov.in ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಕಾಯ್ದಿರಿಸಿದರೆ ಶೇ. 5 ರಿಯಾಯಿತಿ ಸಿಗಲಿದೆ.
ಪ್ರಯಾಣಿಕರು ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ, ಬರುವ ಪ್ರಯಾಣದ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುವುದು.
ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗ ತಮ್ಮ ಬಸ್ ಹೊರಡುವ ನಿಲ್ದಾಣ ಮತ್ತು ಪಿಕ್-ಅಪ್ ಪಾಯಿಂಟ್ ಅನ್ನು ಗಮನಿಸುವಂತೆ KSRTC ಮನವಿ ಮಾಡಿದೆ. ಅಲ್ಲದೆ, ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆಯು ಕರ್ನಾಟಕವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೆರಿಯ ಪ್ರಮುಖ ನಗರಗಳಲ್ಲಿಯೂ ಲಭ್ಯವಿದೆ. ಹೆಚ್ಚುವರಿ ಬಸ್‌ಗಳ ವೇಳಾಪಟ್ಟಿ ಮತ್ತು ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

error: Content is protected !!