ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೆಡಿಗೇಡಿಗಳು ಅಸಭ್ಯ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ಎರಡು ಬಾರಿ ನೊಟೀಸ್ ಕಳಿಸಿದ್ದಾರೆ. ಆದರೆ ಈ ಎರಡೂ ನೊಟೀಸ್ ಗಳಿಗೆ ಅವರು ಉತ್ತರ ನೀಡಿಲ್ಲ.
ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಚೆನ್ನಮ್ಮನಕರೆ ಅಚ್ಚುಕಟ್ಟು ಪೊಲೀಸರಿಂದ ನೊಟೀಸ್ ಕಳಿಸಲಾಗಿದೆ. ಪೊಲೀಸರ ನೊಟೀಸ್ಗಳಿಗೆ ವಿಜಯಲಕ್ಷ್ಮಿ ಅವರು ಕ್ಯಾರೇ ಎನ್ನುತ್ತಿಲ್ಲ.
ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟ ಕಮೆಂಟ್ಗಳು ಬಂದಿವೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಹಾಗಾಗಿ ಮಹಿಳಾ ಆಯೋಗದಿಂದ ಸುಮೋಟೊ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು. ಎರಡು ನೊಟೀಸ್ಗಳಿಗೂ ವಿಜಯಲಕ್ಷ್ಮಿ ಅವರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಈಗ ಮೂರನೇ ನೊಟೀಸ್ ನೀಡಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ.
ಒಂದು ವೇಳೆ, ಮೂರನೇ ನೊಟೀಸ್ಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದಾದರೆ ಪೊಲೀಸರು ಈ ಪ್ರಕರಣವನ್ನು ಮುಕ್ತಾಯ ಮಾಡಲಿದ್ದಾರೆ. ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಹೀಗಾಗಿ ಈಗಲಾದರೂ ವಿಜಯಲಕ್ಷ್ಮಿ ಅವರು ನೊಟೀಸ್ಗೆ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.