March 23, 2026
Monday, March 23, 2026
spot_img

ಸರ್ಕಾರದಿಂದ ನಟ ಕಿಚ್ಚ ಸುದೀಪ್ ಟಾರ್ಗೆಟ್: ಛಲವಾದಿ ನಾರಾಯಣ ಸ್ವಾಮಿ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಕಿಚ್ಚ ಸುದೀಪ್ ಅವರನ್ನುಟಾರ್ಗೆಟ್ ಮಾಡಿರುವ ರಾಜ್ಯ ಸರ್ಕಾರ, ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ ಸ್ವಾಮಿ ಅವರು, ‘ಇದೇನು ಕೈಗಾರಿಕೆಯಾ? ಇಲ್ಲೇನು ಅನಾರೋಗ್ಯ ತರುವಂಥ ಹೊಗೆ ಬರ್ತಿದೆಯಾ? ಮಾಲಿನ್ಯಕಾರಕ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಮುಚ್ಚೋಕೆ ಇವರಿಗೆ ಆಗಿಲ್ಲ. ಅಂತಹ ಫ್ಯಾಕ್ಟರಿಗಳನ್ನು ಬಿಟ್ಟು ಇಲ್ಲಿಗೆ ಬಂದು ಬೀಗ ಹಾಕಿಸಿದ್ದಾರೆ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.

ಇದು ಸರ್ಕಾರ ನೇರವಾಗಿ ನಟ ಸುದೀಪ್ ಅವರನ್ನು ಟಾರ್ಗೆಟ್ ಮಾಡಿರೋದು. ಇದು ಜನಾಂಗೀಯ ಟಾರ್ಗೆಟ್ ಕೂಡ ಹೌದು’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ಅವಧಿಯಲ್ಲಿ ಸ್ಯಾಂಡಲ್‌ವುಡ್‌ನ ಇತರೆ ಗಣ್ಯರನ್ನು ಟಾರ್ಗೆಟ್ ಮಾಡಿದ ಪ್ರಸಂಗಗಳನ್ನು ನೆನಪಿಸಿದ ನಾರಾಯಣ ಸ್ವಾಮಿ, ‘ರಾಜಣ್ಣ (ಡಾ. ರಾಜ್‌ಕುಮಾರ್ ಕುಟುಂಬ), ನಾಗೇಂದ್ರ ಬಳಿಕ ಈಗ ಸುದೀಪ್ ಟಾರ್ಗೆಟ್. ಇದು ಸ್ಪಷ್ಟವಾಗಿ ಜನಾಂಗೀಯ ಟಾರ್ಗೆಟ್’ ಎಂದು ಪುನರುಚ್ಚರಿಸಿದರು.

ಬಿಗ್ ಬಾಸ್ ಕಾರ್ಯಕ್ರಮದ ಸ್ಥಗಿತದ ಹಿಂದಿರುವ ಕಾರಣಗಳು ಪರಿಸರ ನಿಯಮಗಳ ಉಲ್ಲಂಘನೆಗಿಂತ ಹೆಚ್ಚಾಗಿ ರಾಜಕೀಯ ಪ್ರೇರಿತವಾಗಿದ್ದು, ನಟ ಸುದೀಪ್ ಅವರನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ವಿಪಕ್ಷ ನಾಯಕರ ಬಲವಾದ ಆರೋಪವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !