ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋರ್ಟ್ ಆದೇಶದ ಬಳಿಕವೂ ಕೊಲೆ ಆರೋಪಿ ದರ್ಶನ್ಗೆ ಹಾಸಿಗೆ, ದಿಂಬು ನೀಡಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕೋರ್ಟ್ ಸೆ.19ಕ್ಕೆ ಕಾಯ್ದಿರಿಸಿದೆ.
ಇಂದು 57ನೇ ಸಿಸಿಹೆಚ್ ಕೋರ್ಟ್ ಕೊಲೆ ಆರೋಪಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದರು. ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ದರ್ಶನ್ಗೆ ನೀಡಿರುವ ಸೌಲಭ್ಯಗಳ ಕುರಿತ ವರದಿಯನ್ನು ಸರ್ಕಾರದ ಪರ ವಕೀಲ ಸಚಿನ್ ಸಲ್ಲಿಕೆ ಮಾಡಿದರು.
ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ವಾದ ಆರಂಭಿಸಿ, ಕೋರ್ಟ್ ಆದೇಶ ಮಾಡಿದರೂ ಕೂಡ ಲಘುವಾಗಿ ಪರಿಗಣಿಸಿದೆ. ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ವಿಡಿಯೋ ಕಾಲ್ಗೆ ಅವಕಾಶ ನೀಡಲಾಗಿದೆ. ಫೋನ್ ಮಾಡಲು ಕೂಡ ಅವಕಾಶ ನೀಡಲಾಗಿದೆ.
ಕಂಬಳಿ, ಚಾಪೆ, ನೀಡಿದ್ದಾರೆ ಅಂತ ಉಲ್ಲೇಖ ಮಾಡಿದ್ದಾರೆ. ಆದರೆ, ನಾವು ಕೇಳಿದ್ದನ್ನು ಕೊಡುತ್ತಿಲ್ಲ. ಕ್ವಾರಂಟೈನ್ ಸೆಲ್ ಅಲ್ಲಿ ಒಂದು ತಿಂಗಳಿಂದ ಇರಿಸಿದ್ದಾರೆ. ಪಾಕಿಸ್ತಾನದ ಆರೋಪಿಗಳಿಗೂ ಕೇರಂ ಗೇಮ್ ಆಡೋಕೆ ಬಿಟ್ಟಿದ್ದಾರೆ. ನಮ್ಮ ಆರೋಪಿಗೆ ಅದನ್ನ ಕೊಡದೆ ಹಿಂಸೆ ನೀಡುತ್ತಿದ್ದಾರೆ ಎಂದರು.
ಸರ್ಕಾರದ ಪರ ವಕೀಲ ಸಚಿನ್ ಪ್ರತಿವಾದ ಮಾಡಿ, ಜೈಲ್ ಮ್ಯಾನುಯಲ್ ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕಂಬಳಿ, ಬ್ಲಾಂಕೇಟ್, ಲೋಟ, ತಟ್ಟೆ ನೀಡಲಾಗಿದೆ. ಬೆಳಗ್ಗೆ 1 ಗಂಟೆ ಹಾಗೂ ಸಂಜೆ 1 ಗಂಟೆ ವಾಕಿಂಗ್ಗೆ ಅವಕಾಶ ಮಾಡಿಕೊಡಲಾಗಿದೆ.
ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ನೀಡಲಾಗ್ತಿದೆ. ಅದನ್ನು ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕ್ವಾರಂಟೈನ್ ಅನ್ನೋದು ಇಲ್ಲ ಈಗ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೆ.19ಕ್ಕೆ ಆದೇಶವನ್ನು ಕಾಯ್ದಿರಿಸಿದೆ.