ಹೊಸದಿಗಂತ ವರದಿ ಹಾಸನ:
ಹಾಸನದ ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಜಾತಿಯ ಮರಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಖಚಿತ ಮಾಹಿತಿ ಆಧಾರವಾಗಿ ದಾಳಿ ನಡೆಸಿದ ಅಧಿಕಾರಿಗಳು, ಮಂಗಳೂರಿಗೆ ಎರಡು ಗೂಡ್ಸ್ ವಾಹನಗಳಲ್ಲಿ ತರಕಾರಿ ಸಾಗಿಸುವ ರೀತಿಯಲ್ಲಿ ಟಾರ್ಪಲ್ ಹಾಕಿ ಮುಚ್ಚಿ ಮರಗಳನ್ನು ಸಾಗಿಸುತ್ತಿದ್ದ ಇಬ್ಬರು ಅಪರಿಚಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅರಣ್ಯ ಇಲಾಖೆಯ ವರದಿ ಪ್ರಕಾರ, ಈ ದಾಳಿ ವೇಳೆ ಏಳು ಟನ್ನಷ್ಟು ವಿವಿಧ ಜಾತಿಯ ಕಾಡುಮರಗಳು ಮತ್ತು ಇಬ್ಬರು ಚಾಲಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಘಟನೆ ಸೇರಿದಂತೆ ಕಳೆದ ಒಂದು ವಾರದಲ್ಲಿ ಅಧಿಕೃತ ದಾಳಿ ನಡೆಸಿ, ಐದು ವಾಹನಗಳಲ್ಲಿ ಸಾಗಿಸುತ್ತಿದ್ದ ಅಕ್ರಮ ಮರಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನದಲ್ಲಿ ಹೆಚ್ಚುತ್ತಿರುವ ಅಕ್ರಮ ಮರ ಸಾಗಾಟ ಪ್ರಕರಣಗಳ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯನ್ನು ರೇಂಜ್ ಅರಣ್ಯಾಧಿಕಾರಿ (RPO) ಹೇಮಂತ್ ಕುಮಾರ್ ನೇತೃತ್ವದಲ್ಲಿ ನಡೆಸಲಾಗಿದೆ.