ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆ ಜಿಲ್ಲೆಯ ಹಿಡಕಲ್ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಿಡಕಲ್ ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ದಾಖಲಾಗಿದೆ.
ಈ ಭಾರೀ ಮಳೆಯ ಪರಿಣಾಮವಾಗಿ ಜಲಾಶಯವು ಶೇಕಡಾ 99.8ರಷ್ಟು ಭರ್ತಿಯಾಗಿದ್ದು, ಘಟಪ್ರಭಾ ನದಿಯ ಒಡಲಾಳದಿಂದ ಪ್ರವಾಹದ ಆತಂಕ ಎದುರಾಗಿದೆ. ಜಿಲ್ಲಾಡಳಿತವು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ನದಿ ತೀರದ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ. ಹಿಡಕಲ್ ಜಲಾಶಯದ ಗರಿಷ್ಟ ಜಲಮಟ್ಟ 2175 ಅಡಿಗಳಾಗಿದ್ದು, ಜಲಾಶಯಕ್ಕೆ ಸದ್ಯ 13,337 ಕ್ಯೂಸೆಕ್ನಷ್ಟು ಒಳಹರಿವು ದಾಖಲಾಗಿದೆ. ಈ ಪ್ರಮಾಣವು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಘಟಪ್ರಭಾ ನದಿಗೆ 6,000 ಕ್ಯೂಸೆಕ್ನಷ್ಟು ನೀರನ್ನು ಬಿಡುಗಡೆ ಮಾಡಲಾಗುತ್ತಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ 20,000 ಕ್ಯೂಸೆಕ್ವರೆಗೆ ನೀರು ಹರಿಬಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.