Tuesday, October 21, 2025

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ರೈಲು ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯ ಅಬ್ಬರ ಮುಂದುವರಿದಿದ್ದು, ರೈಲು ಮತ್ತು ರಸ್ತೆ ಸಂಚಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪಠಾಣ್‌ಕೋಟ್-ಜಮ್ಮು ವಿಭಾಗದಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದಾಗಿ ರೈಲು ಹಳಿಗಳು ಹಾನಿಗೊಳಗಾಗಿದ್ದು, ಹಲವು ದಿನಗಳಿಂದ ರೈಲು ಸಂಚಾರ ಸ್ಥಗಿತಗೊಂಡಿದೆ. ಈ ಪರಿಣಾಮವಾಗಿ ಸಾವಿರಾರು ಪ್ರಯಾಣಿಕರು, ವಿಶೇಷವಾಗಿ ಯಾತ್ರಿಕರು, ಜಮ್ಮು ಮತ್ತು ಕತ್ರಾ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.

ಭಾರೀ ಮಳೆಯಿಂದಾಗಿ ಸೆಪ್ಟೆಂಬರ್ 30ರವರೆಗೆ ಜಮ್ಮು ಮತ್ತು ಕತ್ರಾದಿಂದ ಹೊರಡುವ ಮತ್ತು ಒಳಬರುವ 68 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 24 ರೈಲುಗಳನ್ನು ಪುನರಾರಂಭಗೊಳಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಮಾತಾ ವೈಷ್ಣೋದೇವಿ ದೇವಸ್ಥಾನದ ಬಳಿ ಸಂಭವಿಸಿದ ಭೂಕುಸಿತದಲ್ಲಿ 34 ಜನರು ಸಾವನ್ನಪ್ಪಿರುವ ಘಟನೆ ಆಘಾತ ಉಂಟುಮಾಡಿದೆ. ಈ ನಡುವೆ, ಜಮ್ಮು ಪ್ರದೇಶವು 1910ರಿಂದ ಈವರೆಗಿನ ಅತಿ ಹೆಚ್ಚು ಮಳೆಯಾದ 380 ಮಿ.ಮೀ. ಮಳೆಯನ್ನಪ್ಪಿಕೊಂಡಿದೆ.

ಸ್ಥಳೀಯರ ಹಾಗೂ ಸಿಕ್ಕಿಬಿದ್ದ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಜಮ್ಮು-ಕತ್ರಾ ವಿಭಾಗದಲ್ಲಿ ಹೆಚ್ಚುವರಿ ಶಟಲ್ ರೈಲುಗಳನ್ನು ಸೇರಿಸಲಾಗಿದೆ. ಸೆಪ್ಟೆಂಬರ್ 7ರಿಂದ ವಂದೇ ಭಾರತ್ ರೈಲು ಸೇವೆ ಪುನರಾರಂಭವಾಗಲಿದೆ. ಈಗಾಗಲೇ 5,700ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಶೇಷ ರೈಲುಗಳ ಮೂಲಕ ಸುರಕ್ಷಿತವಾಗಿ ಸಾಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಕಾಶ್ಮೀರ ಕಣಿವೆಯ ವಿವಿಧ ಭಾಗಗಳಲ್ಲಿ ಮಳೆಯ ತೀವ್ರತೆ ಮುಂದುವರಿಯುತ್ತಿದ್ದು, ದಕ್ಷಿಣ ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಅತಿಭಾರೀ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು-ಕಾಶ್ಮೀರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

error: Content is protected !!