Monday, December 15, 2025

ಪ್ರಭಾವಿಗಳಿಗೆ ರಾಜಮಾರ್ಗ, ಬಡವರಿಗೆ ಬೀದಿಪಾಲು: ರಸ್ತೆ ಕಾಮಗಾರಿ ವಿರುದ್ಧ ಮಾಜಿ ಸಚಿವ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊನ್ನಾಳಿ ಪಟ್ಟಣದಲ್ಲಿ ಕೆಶಿಪ್ ಯೋಜನೆಯಡಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯು ಈಗ ಭಾರಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಕಾಮಗಾರಿಯು ಬಡವರ ಮನೆಗಳನ್ನು ಧ್ವಂಸ ಮಾಡಿ, ರಾಜಕೀಯ ಪ್ರಭಾವ ಹೊಂದಿರುವವರ ಕಟ್ಟಡಗಳನ್ನು ಕೈಬಿಟ್ಟಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಣುಕಾಚಾರ್ಯ ಅವರ ಪ್ರಕಾರ, ರಸ್ತೆ ವಿಸ್ತರಣೆಗಾಗಿ ಗುರುತಿಸಲಾದ ಕೆಲವು ಪ್ರಭಾವಶಾಲಿ ವ್ಯಕ್ತಿಗಳಿಗೆ ಸೇರಿದ ಅಂಗಡಿಗಳು ಮತ್ತು ಮನೆಗಳನ್ನು ಹಾಗೆಯೇ ಬಿಡಲಾಗಿದೆ. ಆದರೆ, ಬಡ ಮತ್ತು ಸಾಮಾನ್ಯ ಜನರ ಅಂಗಡಿ-ಮುಂಗಟ್ಟು ಹಾಗೂ ಮನೆಗಳನ್ನು ಮಾತ್ರ ಒಡೆದು ಹಾಕಲಾಗಿದೆ. ಸರಿಯಾದ ಯೋಜನೆ ಮತ್ತು ನಿಯಮಾನುಸಾರ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

“ಹೊನ್ನಾಳಿಯ ಸೌಂದರ್ಯವನ್ನು ಹೆಚ್ಚಿಸಲು ಕೈಗೆತ್ತಿಕೊಂಡಿರುವ ಈ ಕೆಶಿಪ್ ರಸ್ತೆ ಅಗಲೀಕರಣವು ಬಹಳ ಮಹತ್ವದ್ದಾಗಿದೆ. ಆದರೆ, ರಸ್ತೆ ಅಗಲೀಕರಣವನ್ನು ಸರಿಯಾಗಿ ಮತ್ತು ಸಮಾನವಾಗಿ ಮಾಡದೆ ಇರುವುದು ಸರಿಯಲ್ಲ. ರಸ್ತೆಗೆ ಗುರುತಿಸಿದ ಎಲ್ಲಾ ಕಟ್ಟಡಗಳನ್ನು ಯಾವುದೇ ಭೇದವಿಲ್ಲದೆ ತೆರವುಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಬಡವರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಒಂದು ನ್ಯಾಯ ಆಗಬಾರದು,” ಎಂದು ರೇಣುಕಾಚಾರ್ಯ ಮತ್ತು ಸ್ಥಳೀಯರು ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸಿದ್ದಾರೆ.

error: Content is protected !!