Sunday, September 14, 2025

ತುಮಕೂರಿನಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವದ ಸಂಭ್ರಮ: ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ!

ಹೊಸದಿಗಂತ ವರದಿ,ತುಮಕೂರು

ನಗರದ ಬಿ.ಜಿ.ಎಸ್. ವೃತ್ತದಲ್ಲಿರುವ ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 8ನೇ ವರ್ಷದ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ನಾಗರಕಟ್ಟೆ ದೇವಾಲಯದ ಮುಂಭಾದಲ್ಲಿ ಹಿಂದೂ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮುಖೇನ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಗಣೇಶೋತ್ಸವಕ್ಕೆ ಚಾಲನೆ ನೀಡಿದರು.

ನಾಗರಕಟ್ಟೆ ದೇವಾಲಯದ ಮುಂಭಾಗದಲ್ಲಿ ಅಲಂಕೃತಗೊಂಡ ವಿನಾಯಕನನ್ನು ಅಲಂಕೃತವಾದ ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ತುಮಕೂರಿನ ರಾಜಬೀದಿಗಳಲ್ಲಿ ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ, ನಾಸಿಕ್ ಡೋಲು, ವಿದ್ಯುತ್ ದೀಪಾಲಂಕಾರ, ಕಣ್ಮನ ತಣಿಸುವ ಬಾಣ-ಬಿರುಸುಗಳ ಮದ್ದಿನ ವೈಖರಿಗಳೊಂದಿಗೆ ಮೆರವಣಿಗೆ ಉತ್ಸವವನ್ನು ನಡೆಸಲಾಯಿತು.

ಗಣೇಶೋತ್ಸವದ ಮೆರವಣಿಗೆಯಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಮಾಜಿ ಸಚಿವ ಸೊಗಡು ಶಿವಣ್ಣ, ಟಿ.ಬಿ. ಶೇಖರ್, ಮಂಜುಭಾರ್ಗವ, ಪ್ರಭಾಕರ್, ಧನಿಯಕುಮಾರ್ ಹಾಗೂ ಸಂಘಟನೆಯ ಕಾರ್ಯಕರ್ತರುಗಳು ಭಾಗವಹಿಸಿದ್ದರು.

ಮೆರವಣಿಗೆಯು ಬಿಜಿಎಸ್ ವೃತ್ತದಿಂದ ಆರಂಭಗೊಂಡು ಲಕ್ಕಪ್ಪ ವೃತ್ತ, ಜೆ.ಸಿ. ರಸ್ತೆ, ಮಂಡಿಪೇಟೆ ವೃತ್ತ, ಸ್ವತಂತ್ರ ಚೌಕ, ಅಶೋಕ ರಸ್ತೆ, ಬಿ.ಜಿ.ಎಸ್ ವೃತ್ತ, ಎಂ.ಜಿ. ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಕೋಟೆ ಆಂಜನೇಯ ವೃತ್ತ, ಗಾರ್ಡನ್ ರಸ್ತೆ ಮುಖೇನ ಸಾಗಿ ಕೆ.ಎನ್. ಎಸ್. ಕಲ್ಯಾಣಿಯಲ್ಲಿ ಗಣೇಶಮೂರ್ತಿಯನ್ನು ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು.

ಭಾರತದ ಹೆಮ್ಮೆಯ ಆಪರೇಷನ್ ಸಿಂಧೂರ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ರಹ್ಮೋಸ್ ಕ್ಷಿಪಣಿಯ ಬೃಹತ್ ಸ್ಥಬ್ದ ಚಿತ್ರ, ಅಂಬೇಡ್ಕರ್, ರಾಮ, ಸೀತೆ, ಲಕ್ಷ್ಮಣ ಸೇರಿದಂತೆ ವಿವಿಧ ಸ್ತಬ್ದ ಚಿತ್ರಗಳು ಈ ಬಾರಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಜತೆಗೆ ಮಂಗಳ ವಾದ್ಯಗಳು, ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ, ನಾಸಿಕ್ ಡೋಲು ಮತ್ತಿತರ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಹಿಂದೂ ಮಹಾಗಣಪತಿ ಮೂರ್ತಿಯ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡು ಬಂತು.

ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿ ಉತ್ಸವಕ್ಕೆ ಮೆರುಗು ನೀಡಿದರು.

ಭದ್ರಮ್ಮ ವೃತ್ತ, ಬಿ.ಹೆಚ್.ರಸ್ತೆ, ಬಿಜಿಎಸ್ ವೃತ್ತ, ಲಕ್ಕಪ್ಪ ವೃತ್ತದ ಮೂಲಕ ಜೆ.ಸಿ.ರಸ್ತೆ, ಮಂಡಿಪೇಟೆ ಮುಖ್ಯರಸ್ತೆ, ಸ್ವತಂತ್ರ್ಯ ವೃತ್ತ, ಅಶೋಕ ರಸ್ತೆ ಮುಖಾಂತರ ಗಾಯತ್ರ ಚಿತ್ರಮಂದಿರ, ಎಂ.ಜಿ.ರಸ್ತೆ, ರಾಮಪ್ಪ ವೃತ್ತ, ಕೋಟೆ ಆಂಜನೇಯಸ್ವಾಮಿ ವೃತ್ತದ ಮೂಲಕ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಜನ ಸೇರಿ ಸಂಭ್ರಮಿಸಿದರು.

ನಂತರ ಗಾರ್ಡನ್ ರಸ್ತೆಯ ಕೆಎನ್‍ಎಸ್ ಕಲ್ಯಾಣಿಯಲ್ಲಿ ಗಣಪತಿ ಮೂರ್ತಿಯನ್ನು ಆಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಭಕ್ತರ ಜೈಕಾರ, ಜಯಘೋಷದ ನಡುವೆ ವೈಭವೋಪೇತವಾಗಿ ವಿಸರ್ಜನೆ ಮಾಡಲಾಯಿತು.

ಹಿಂದೂ ಮಹಾಗಣಪತಿ ಸೇವಾ ಸಮಿತಿಯ ಸಹ ಕಾರ್ಯದರ್ಶಿ ಮಾರಣ್ಣ ಪಾಳೇಗಾರ್, ಮುಖಂಡರಾದ ಸಿ.ಆರ್. ಮೋಹನ್‍ಕುಮಾರ್, ಯಶಸ್ ಟಿ.ವೈ., ಧನಿಯಾಕುಮಾರ್, ರೇಣುಕಾನಂದ್, ಲೋಕಣ್ಣ, ಮಂಜೇಶ್, ಕಿರಣ್‍ಕುಮಾರ್ ಸೇರಿದಂತೆ ಹಲವರಿದ್ದರು. ಗಣೇಶೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ