ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀರ್ಘ ರಜೆ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ ಭಾರೀ ಪ್ರವಾಸಿಗರು ಹರಿದುಬಂದಿದ್ದಾರೆ. ಇದರ ಪರಿಣಾಮ ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ಸೇರಿದಂತೆ ಪಶ್ಚಿಮ ಘಟ್ಟದ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾವಿರಾರು ಪ್ರವಾಸಿಗರು ವಾಹನಗಳೊಂದಿಗೆ ಆಗಮಿಸಿರುವುದರಿಂದ ಹಲವು ಕಿಲೋಮೀಟರ್ಗಳಷ್ಟು ವಾಹನಗಳು ಸಾಲುಗಟ್ಟಿರುವ ಸ್ಥಿತಿ ನಿರ್ಮಾಣವಾಗಿದೆ.
ಮುಳ್ಳಯ್ಯನಗಿರಿಗೆ ಜಿಲ್ಲಾಡಳಿತ ಪ್ರತಿದಿನ 1200 ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಬೆಳಿಗ್ಗೆ 600 ಹಾಗೂ ಮಧ್ಯಾಹ್ನ 600 ವಾಹನಗಳಿಗೆ ಪ್ರವೇಶವಿದೆ. ಆದಾಗ್ಯೂ ನಿರೀಕ್ಷೆಗೂ ಮೀರಿದ ವಾಹನಗಳ ಆಗಮನದಿಂದ ಸುಮಾರು 4 ರಿಂದ 5 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆ ನಡುವೆ ಪ್ರವಾಸಿಗರು ಸಿಲುಕಿ ಪರದಾಡುವಂತಾಗಿದೆ.
ಮುಳ್ಳಯ್ಯನಗಿರಿ ಮಾರ್ಗದ ಚೆಕ್ಪೋಸ್ಟ್ನಿಂದ ಅಲ್ಲಂಪುರ ಗ್ರಾಮದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪೊಲೀಸರು ವಾಹನಗಳ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. ಒಂದು ವಾಹನ ಹೊರಬಂದ ಬಳಿಕ ಇನ್ನೊಂದಕ್ಕೆ ಅವಕಾಶ ನೀಡುವ ರೀತಿಯಲ್ಲಿ ಪೊಲೀಸರು ನಿಯಮ ಜಾರಿಗೊಳಿಸುತ್ತಿದ್ದಾರೆ.
ಅದೇ ಸಮಯದಲ್ಲಿ, ಜಿಟಿ-ಜಿಟಿ ಮಳೆಯೂ ಕೂಡ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಮತ್ತಷ್ಟು ಕಷ್ಟಮಾಡಿದೆ. ಭಾರೀ ವಾಹನ ಸಂಚಾರವನ್ನು ನಿಯಂತ್ರಿಸಲು ಚೆಕ್ಪೋಸ್ಟ್ ಸಿಬ್ಬಂದಿ ಹೈರಾಣಾಗಿದ್ದಾರೆ.