Sunday, January 11, 2026

ಸೋಲಿನ ಭಯ ಹುಟ್ಟಿಸಿ ಸೋತ ಒಮಾನ್: ಹ್ಯಾಟ್ರಿಕ್ ಜಯದೊಂದಿಗೆ ಸೂಪರ್ 4ಗೆ ಭಾರತ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬುಧಾಬಿಯಲ್ಲಿ ನಡೆದ ಏಷ್ಯಾಕಪ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹ್ಯಾಟ್ರಿಕ್ ಜಯ ದಾಖಲಿಸಿ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 4ಕ್ಕೆ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 188 ರನ್ ಗಳಿಸಿದ್ದು, 189ರನ್ ಗುರಿ ಬೆನ್ನಟ್ಟಿದ ಒಮಾನ್ ತಂಡ ಉತ್ತಮ ಹೋರಾಟ ನಡೆಸಿದರೂ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 167 ರನ್ ಗಳಿಸಿ 21 ರನ್ ಅಂತರದಿಂದ ಸೋಲು ಕಂಡಿತು. ನಿರಂತರ ಸೋಲುಗಳನ್ನು ಅನುಭವಿಸಿದ್ದ ಒಮಾನ್ ಈ ಬಾರಿ ಉತ್ತಮ ಹೋರಾಟ ನೀಡಿದರೂ, ಭಾರತದ ಮುಂದೆ ನಿಂತುಕೊಳ್ಳಲಿಲ್ಲ.

ಒಮಾನ್ ತಂಡ ಉತ್ತಮ ಆರಂಭ ನೀಡಿ ಭಾರತವನ್ನು ಒತ್ತಡಕ್ಕೊಳಪಡಿಸಿತು. ನಾಯಕ ಜಿತೇಂದರ್ ಸಿಂಗ್ 32 ರನ್ ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಔಟಾದರು. ನಂತರ ಅಮೀರ್ ಕಲೀಮ್ ಮತ್ತು ಹಮ್ಮದ್ ಮಿರ್ಜಾ ಉತ್ತಮ ಜೊತೆಯಾಟ ನೀಡಿ ಭಾರತಕ್ಕೆ ಆಘಾತಕಾರಿ ಸೋಲು ತರುವ ಮಟ್ಟಿಗೆ ಹೋರಾಡಿದರು. ಕಲೀಮ್ 64 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಮಿರ್ಜಾ ಸಹ ಅರ್ಧಶತಕ ದಾಖಲಿಸಿದರೂ ನಿರ್ಣಾಯಕ ಕ್ಷಣದಲ್ಲಿ ವಿಕೆಟ್ ಕಳೆದುಕೊಂಡರು. ಕೊನೆ ಓವರ್‌ಗಳಲ್ಲಿ ಒಮಾನ್ ಕೈಚೆಲ್ಲಿದ ಹಿನ್ನೆಲೆಯಲ್ಲಿ ಜಯ ಭಾರತಕ್ಕೆ ಸೇರಿತು.

ಭಾರತದ ಬೌಲಿಂಗ್ ದಾಳಿಯು ನಿರೀಕ್ಷಿತ ಮಟ್ಟ ತೋರಲಿಲ್ಲ. ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ ಮತ್ತು ಅರ್ಶದೀಪ್ ತಲಾ ಒಂದು ವಿಕೆಟ್ ಪಡೆದರೂ ದುಬಾರಿ ಎಸೆತಗಳಿಂದ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಬಲಹೀನತೆ ಬಹಿರಂಗವಾಯಿತು. ವಿಶೇಷವಾಗಿ ಬುಮ್ರಾ ಬದಲಿಗೆ ಕಣಕ್ಕಿಳಿದ ಅರ್ಶದೀಪ್ ಹೆಚ್ಚು ರನ್ ಬಿಟ್ಟುಕೊಟ್ಟ ಕಾರಣ ಭಾರತ ಮುಂದಿನ ಹಂತಗಳಲ್ಲಿ ಚಿಂತೆಗೊಳಗಾಗಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ 56 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ 38, ಅಕ್ಷರ್ ಪಟೇಲ್ 26 ಮತ್ತು ತಿಲಕ್ ವರ್ಮಾ 29 ರನ್ ಗಳಿಸಿದರು. ಆದರೆ ಹಾರ್ದಿಕ್ ಪಾಂಡ್ಯ, ಶುಭ್‌ಮನ್ ಗಿಲ್, ಶಿವಂ ದುಬೆ ನಿರಾಶೆ ಮೂಡಿಸಿದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಇಳಿಯದೇ ಉಳಿದಿದ್ದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ.

ಭಾರತ ಗೆಲುವು ಸಾಧಿಸಿದರೂ ಬೌಲಿಂಗ್ ವಿಭಾಗದ ಬಲಹೀನತೆ, ಮಧ್ಯಮ ಕ್ರಮದ ವೈಫಲ್ಯ ಮತ್ತು ತಂತ್ರದ ಕೊರತೆಗಳು ಸೂಪರ್ 4 ಹಂತದಲ್ಲಿ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಮೂಡಿಸಿದೆ. ಆದಾಗ್ಯೂ ಹ್ಯಾಟ್ರಿಕ್ ಜಯದೊಂದಿಗೆ ವಿಶ್ವಾಸ ತುಂಬಿಕೊಂಡ ಭಾರತ ಈಗ ಪಾಕಿಸ್ತಾನ ಸೇರಿದಂತೆ ಬಲಿಷ್ಠ ತಂಡಗಳ ವಿರುದ್ಧ ಸೆಣಸಲು ಸಜ್ಜಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!