ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿ ಕೈಲಾಸ ಯಾತ್ರೆಯ ಎರಡನೇ ಹಂತಕ್ಕೆ ಜಿಲ್ಲಾಡಳಿತ ನೋಂದಣಿ ಆರಂಭಿಸಿದೆ. ಪ್ರಯಾಣವು ಸೆಪ್ಟೆಂಬರ್ 15 ರಿಂದಲೇ ಆರಂಭವಾಗಬೇಕಿತ್ತು. ಆದರೆ, ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಪ್ರಯಾಣ ಆರಂಭಕ್ಕೆ ತಡೆ ನೀಡಲಾಗಿತ್ತು. ಜಿಲ್ಲಾಡಳಿತದ ಪ್ರಕಾರ ಸೆಪ್ಟೆಂಬರ್ 17 ರಿಂದ ಸೀಮಿತ ಸಂಖ್ಯೆಯ ಇನ್ನರ್ ಲೈನ್ ಪರ್ಮಿಟ್ಗಳನ್ನು (ILPs) ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 17 ರ ಬುಧವಾರದಿಂದ ಇನ್ನರ್ ಲೈನ್ ಪರ್ಮಿಟ್ಗಳನ್ನು ನೀಡಲಾಗುವುದು. ಆದಾಗ್ಯೂ ಹವಾಮಾನ ವೈಪರೀತ್ಯದಿಂದಾಗಿ ಈಗಾಗಲೇ ಪಿಥೋರಗಢ ತಲುಪಿರುವ ಪ್ರಯಾಣಿಕರಿಗೆ ಮಾತ್ರ ಪರ್ಮಿಟ್ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಜಿಲ್ಲಾಡಳಿತದಿಂದ ಹವಾಮಾನ ಮಾಹಿತಿ ಪಡೆದ ನಂತರವೇ ಹೆಚ್ಚಿನ ಬುಕಿಂಗ್ಗಳನ್ನು ಮಾಡಿಕೊಳ್ಳುವಂತೆ ಪ್ರವಾಸ ನಿರ್ವಾಹಕರಿಗೆ ಸೂಚನಾ ಪೂರ್ವಕ ಮನವಿ ಮಾಡಲಾಗಿದೆ.
ಆದಿ ಕೈಲಾಸ ಯಾತ್ರೆಗಾಗಿ ಕಳೆದ ಎರಡು ದಿನಗಳಿಂದ ಸುಮಾರು 300 ಜನರು ಧಾರ್ಚುಲಾಕ್ಕೆ ಆಗಮಿಸಿದ್ದಾರೆ. ಆದಿ ಕೈಲಾಸ ಯಾತ್ರೆ ಸೆಪ್ಟೆಂಬರ್ 15 ರಂದು ಆರಂಭವಾಗಬೇಕಿತ್ತು. ಆದರೆ, ಪಿಥೋರಗಢ ಜಿಲ್ಲೆಯಲ್ಲಿ ನಿರಂತರ ಮಳೆ ಮತ್ತು ಭೂಕುಸಿತದಿಂದಾಗಿ ಯಾತ್ರೆ ಪ್ರಾರಂಭವಾಗಿರಲಿಲ್ಲ. ಹವಾಮಾನ ಮುನ್ಸೂಚನೆಯಿಂದಾಗಿ ಸೆಪ್ಟೆಂಬರ್ 16 ರಂದು ಯಾತ್ರೆ ಪ್ರಾರಂಭವಾಗಲಿಲ್ಲ. ಮಳೆಯಿಂದಾಗಿ ವಿವಿಧ ಸ್ಥಳಗಳಲ್ಲಿ ರಸ್ತೆಗಳ ಸಂಚಾರ ಬಂದ್ ಆಗಿದೆ.