ಹೊಸದಿಗಂತ ಡಿಜಿಟಲ್ ಡೆಸ್ಕ್:
ಚರ್ಚೆಗೆ ಕಾರಣವಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ನಡೆಯಬೇಕಿದ್ದ ಚಾರ್ಜ್ ಫ್ರೇಮ್ ವಿಚಾರಣೆಯನ್ನು ಮುಂದೂಡಲಾಗಿದೆ. ಮೂಲತಃ ಬೆಳಿಗ್ಗೆ 11.30 ಕ್ಕೆ ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯಬೇಕಿತ್ತು, ಆದರೆ ನ್ಯಾಯಾಲಯವು ವಿಚಾರಣೆಯನ್ನು ಮಧ್ಯಾಹ್ನ 2.45 ಕ್ಕೆ ಮುಂದೂಡಿದೆ.
ನ್ಯಾಯಾಧೀಶರು 2.45 ಕ್ಕೆ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಮತ್ತು ಅದರ ಸುತ್ತಮುತ್ತ ಭದ್ರತಾ ವ್ಯವಸ್ಥೆಯನ್ನು ಕಟ್ಟುಕಟ್ಟಲಾಗಿದೆ. ಜೈಲಿನ ಚೆಕ್ಪೋಸ್ಟ್ ಬಳಿ ಮೂವರು ಪಿಎಸ್ಐಗಳು ಹಾಗೂ ಐವರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸುರಕ್ಷತಾ ದೃಷ್ಟಿಯಿಂದ ಆರೋಪಿಗಳನ್ನು 12.30 ರ ಸುಮಾರಿಗೆ ಜೈಲಿನಿಂದ ಕರೆದುಕೊಂಡು ಬರಲಾಗಿದ್ದು. ಸಿಎಆರ್ ಸಿಬ್ಬಂದಿಯ ಎಸ್ಕಾರ್ಟ್ ವಾಹನದ ಮೂಲಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಕೋರ್ಟ್ಗೆ ಕರೆತರಲಾಗುತ್ತದೆ. ಕಾಮಾಕ್ಷಿಪಾಳ್ಯ ಪೊಲೀಸರು ಈ ವ್ಯವಸ್ಥೆಗಾಗಿ ಸಹಕರಿಸುತ್ತಿದ್ದಾರೆ.
ಇಂದು ನಡೆಯಲಿರುವ ವಿಚಾರಣೆ ಪ್ರಕರಣದ ಪ್ರಮುಖ ಹಂತವಾಗಿದ್ದು, ದೋಷಾರೋಪ ನಿಗದಿಗೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ನಿರ್ಣಾಯಕ ಬೆಳವಣಿಗೆಗಳು ನಡೆಯಲಿವೆ. ಇಂದಿನ ವಿಚಾರಣೆಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಮುಖಾಮುಖಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಎಲ್ಲಾ ಕಣ್ಣುಗಳು ಈಗ ಮಧ್ಯಾಹ್ನದ ವಿಚಾರಣೆಯತ್ತ ನೆಟ್ಟಿವೆ.

