ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರಿ ಮಳೆಯಿಂದ ಭೂಕುಸಿತ ಉಂಟಾಗಿ ಸಂಚಾರ ರದ್ದಾಗಿದ್ದ ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ಆರಂಭಿಸಲಾಗಿದೆ.
ಕಳೆದ ಮೂರು ವಾರಗಳಿಂದ (22 ದಿನ) ರಸ್ತೆಯಲ್ಲಿ ನಿಂತಿದ್ದ ಸೇಬು ತುಂಬಿ ಟ್ರಕ್ಗಳು ಜಮ್ಮುವಿಗೆ ಪ್ರಯಾಣ ಪುನಾರಂಭಿಸಿವೆ ಎಂದು ಅಲ್ಲಿನ ಸಂಚಾರ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಭೂಕುಸಿತಕ್ಕೀಡಾಗಿದ್ದ ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ಗಳ ಸಂಚಾರಕ್ಕೆ ಅನುಮತಿ ನೀಡುವ ಕುರಿತು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮತ್ತು ಸಿಎಂ ಒಮರ್ ಅಬ್ದುಲ್ಲಾ ಅವರು ಮಾತುಕತೆ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಖಾಜಿಗುಂಡ್ ಟೋಲ್ ಪ್ಲಾಜಾದಿಂದ ಜಮ್ಮು ಕಡೆಗೆ ಲಘು ವಾಹನಗಳ ಸಂಚಾರಕ್ಕೆ ಪೊಲೀಸರು ಇಂದು ಬೆಳಗ್ಗೆ ಅನುಮತಿ ನೀಡಿದ್ದಾರೆ. ಕಳೆದ ಮೂರು ವಾರಗಳಿಂದ 6 ಸಾವಿರಕ್ಕೂ ಹೆಚ್ಚು ವಾಹನಗಳು, ಅದರಲ್ಲೂ ಹೆಚ್ಚಿನವು ಸೇಬು ತುಂಬಿದ ಟ್ರಕ್ಗಳು ಕಾಶ್ಮೀರ ಭಾಗದಲ್ಲಿ ಸಿಲುಕಿಕೊಂಡಿದ್ದವು. ಇಂದು ಬೆಳಗ್ಗೆ 11.30 ಕ್ಕೆ ಟ್ರಕ್ಗಳನ್ನು ಜಮ್ಮು ಕಡೆಗೆ ಸಂಚರಿಸಲು ಅನುಮತಿಸಲಾಯಿತು.