ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಜ್ಯ ಜಲ ವಿವಾದಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವುದು ಸೇರಿದಂತೆ ಜಲ ಸಂಪನ್ಮೂಲ ನಿರ್ವಹಣೆಯ ವಿವಿಧ ಅಂಶಗಳ ಕುರಿತು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡಲು ಕೇಂದ್ರ ಮಾದರಿಯಲ್ಲೇ ರಾಜ್ಯದಲ್ಲೂ ಜಲ ಆಯೋಗ ಅಸ್ತಿತ್ವಕ್ಕೆ ಬರಲಿದೆ ಎಂದು ಜಲಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೀರಿನ ಲಭ್ಯತೆ, ಭವಿಷ್ಯದ ಅವಶ್ಯಕತೆಗಳು, ದಕ್ಷ ನಿರ್ವಹಣೆ ಕುರಿತು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲು ಮತ್ತು ಸರ್ಕಾರಕ್ಕೆ ಕ್ರಮಗಳನ್ನು ಸೂಚಿಸಲು ಜಲ ಸಂಪನ್ಮೂಲ, ಕೃಷಿ, ತೋಟಗಾರಿಕೆ ಮತ್ತು ಹಣಕಾಸು ಇಲಾಖೆಗಳ ಅಧಿಕಾರಿಗಳು ಮತ್ತು ಜಲಶಾಸ್ತ್ರಜ್ಞರು, ಪರಿಸರವಾದಿಗಳು, ಪ್ರಗತಿಪರ ರೈತರು ಮತ್ತು ಇತರ ತಜ್ಞರನ್ನು ಒಳಗೊಂಡ ಶಾಶ್ವತ ಆಯೋಗವನ್ನು ಹೊಂದುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಸ್ತಾವಿತ ಆಯೋಗವು ಕುಡಿಯುವ ನೀರು, ನೀರಾವರಿ, ಕೈಗಾರಿಕೆಗಳಿಗೆ ನೀರು ಒದಗಿಸುವುದು ಮತ್ತು ಇತರ ಸೌಲಭ್ಯಗಳು ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತದೆ. ನಗರಗಳ ಬೆಳವಣಿಗೆ ಮತ್ತು ಜನಸಂಖ್ಯೆಯ ವಲಸೆಯನ್ನು ಗಣನೆಗೆ ತೆಗೆದುಕೊಂಡು, ಮುಂದಿನ 50 ವರ್ಷಗಳ ನೀರಿನ ಅವಶ್ಯಕತೆಗಳ ಕುರಿತು ಅಧ್ಯಯನ ನಡೆಸಲಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಈ ಅವಶ್ಯಕತೆಗಳನ್ನು ಪೂರೈಸಲು ಕ್ರಮಗಳನ್ನು ಸೂಚಿಸಲಿದೆ. ಇತರ ಅಂಶಗಳ ಜೊತೆಗೆ, ಆಯೋಗವು ರಾಜ್ಯ ಮತ್ತು ಇತರ ದೇಶಗಳಲ್ಲಿನ ನೀರಾವರಿ ಮಾದರಿಗಳನ್ನು ಸಹ ನೋಡುತ್ತದೆ ಮತ್ತು ಉತ್ತಮವಾದುದನ್ನು ಶಿಫಾರಸು ಮಾಡುತ್ತದೆ ಎಂದು ತಿಳಿಸಿದರು.

