Sunday, January 11, 2026

SIR ಗುರುತು ಪರಿಶೀಲನೆಗೆ ನೌಕಾಸೇನೆ ಮಾಜಿ ಮುಖ್ಯಸ್ಥರಿಗೆ ಬುಲಾವ್‌: ಚುನಾವಣಾ ಆಯೋಗದ ನಡೆಗೆ ಟೀಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾರ ಪಟ್ಟಿ ಪರಿಷ್ಕರಣೆ ಸಂಬಂಧ ಚುನಾವಣಾ ಆಯೋಗವು ಭಾರತೀಯ ನೌಕಾಸೇನೆ ಮಾಜಿ ಮುಖ್ಯಸ್ಥ ಅಡ್ಮಿರಲ್‌ ಅರುಣ್‌ ಪ್ರಕಾಶ್‌ ಅವರರಿಗೆ, ಗುರುತು ಸಾಬೀತುಪಡಿಸುವಂತೆ ಕೇಳಿದ್ದಾರೆ.

ಮತದಾರರ ಪಟ್ಟಿಯನ್ನು ಶುಚಿಗೊಳಿಸುವ ಪ್ರಕ್ರಿಯೆ ಭಾಗವಾಗಿ, ತಮ್ಮ ಗುರುತನ್ನು ಸಾಬೀತುಪಡಿಸಲು ಅಗತ್ಯವಿರುವ ಸಭೆಗೆ ಹಾಜರಾಗುವಂತೆ, ಚುನಾವಣಾ ಆಯೋಗವು ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್‌ ಪ್ರಕಾಶ್ ಅವರಿಗೆ ಸೂಚಿಸಿದೆ. ಚುನಾವಣಾ ಆಯೋಗದ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ನಿವೃತ್ತ ಅಡ್ಮಿರಲ್‌ ಅರುಣ್‌ ಪ್ರಕಾಶ್‌, ‘ವಿಶೇಷ ತೀವ್ರ ಪರಿಷ್ಕರಣೆ (SIR) ಮಾದರಿಗಳು ಜನರು ನೀಡಿದ ಮಾಹಿತಿಯನ್ನು ಪ್ರತಿಬಿಂಬಿಸಲು ಸಾಧ್ಯವಾಗದಿದ್ದರೆ ಅವುಗಳನ್ನು ಪರಿಷ್ಕರಿಸಬೇಕು’ ಎಂದು ಸೂಚಿಸಿದ್ದಾರೆ. ಅವರ ಹೇಳಿಕೆ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

‘(ಎ) ಎಸ್‌ಐಆರ್ ನಮೂನೆಗಳು ಅಗತ್ಯವಿರುವ ಮಾಹಿತಿಯನ್ನು ಹುಟ್ಟುಹಾಕದಿದ್ದರೆ ಅವುಗಳನ್ನು ಪರಿಷ್ಕರಿಸಬೇಕು ಎಂದು ನಾನು ಚುನಾವಣಾ ಆಯೋಗಕ್ಕೆ ಸೂಚಿಸಬಹುದೇ? (ಬಿ) ಬಿಎಲ್‌ಒ ನಮ್ಮನ್ನು ಮೂರು ಬಾರಿ ಭೇಟಿ ಮಾಡಿದರು ಮತ್ತು ಅವರು ಹೆಚ್ಚುವರಿ ಮಾಹಿತಿಯನ್ನು ಕೇಳಬಹುದಿತ್ತು. (ಸಿ) ನಾವು 82/78 ವರ್ಷ ವಯಸ್ಸಿನ ದಂಪತಿಗಳಾಗಿದ್ದು, ಎಸ್‌ಐಆರ್‌ ಪರಿಶೀಲನೆಗಾಗಿ 18 ಕಿಮೀ ದೂರದಲ್ಲಿರುವ ಕಚೇರಿಗೆ ಎರಡು ವಿಭಿನ್ನ ದಿನಾಂಕಗಳಲ್ಲಿ ಹಾಜರಾಗಲು ಕೇಳಲಾಗಿದೆ’ಎಂದು ಅಡ್ಮಿರಲ್ ಅರುಣ್‌ ಪ್ರಕಾಶ್ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಅರುಣ್‌ ಪ್ರಕಾಶ್‌ ಅವರ ಈ ಎಕ್ಸ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವು ನೆಟ್ಟಿಗರು, ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

’20 ವರ್ಷಗಳ ಹಿಂದೆ ನಿವೃತ್ತರಾದಾಗಿನಿಂದ ನನಗೆ ಯಾವುದೇ ವಿಶೇಷ ಸವಲತ್ತುಗಳ ಅಗತ್ಯವಿಲ್ಲ. ನಾನು ಅದನ್ನು ಎಂದಿಗೂ ಕೇಳಿಲ್ಲ. ನನ್ನ ಹೆಂಡತಿ ಮತ್ತು ನಾನು ಅಗತ್ಯವಿರುವಂತೆ SIR ಫಾರ್ಮ್‌ಗಳನ್ನು ಭರ್ತಿ ಮಾಡಿದ್ದೇವೆ. ಚುನಾವಣಾ ವೆಬ್‌ಸೈಟ್‌ನಲ್ಲಿ ಗೋವಾ ಡ್ರಾಫ್ಟ್ ಮತದಾರರ ಪಟ್ಟಿ 2026ರಲ್ಲಿ ನಮ್ಮ ಹೆಸರುಗಳು ಕಾಣಿಸಿಕೊಂಡಿರುವುದನ್ನು ನೋಡಿ ಸಂತೋಷಪಟ್ಟಿದ್ದೇವೆ. ಆದಾಗ್ಯೂ, ನಾವು ಆಯೋಗದ ಸೂಚನೆಗಳನ್ನು ಅನುಸರಿಸುತ್ತೇವೆ’ ಎಂದು ಮಾಜಿ ನೌಕಾಪಡೆಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಅಡ್ಮಿರ್‌ (ನಿವೃತ್ತ) ಅರುಣ್‌ ಪ್ರಕಾಶ್‌ ಅವರು ತಮ್ಮ ವೃತ್ತಿಜೀವನದಲ್ಲಿ ಯುದ್ಧವಾಹಕ ಸ್ಕ್ವಾಡ್ರನ್, ನೌಕಾ ವಾಯುನೆಲೆ ಮತ್ತು ವಿಮಾನ-ವಾಹಕ ಐಎನ್ಎಸ್ ವಿರಾಟ್ ಸೇರಿದಂತೆ ನಾಲ್ಕು ಯುದ್ಧನೌಕೆಗಳನ್ನು ಮುನ್ನಡೆಸಿದ್ದಾರೆ. 1971ರ ಯುದ್ಧದ ಸಮಯದಲ್ಲಿ, ಪಂಜಾಬ್‌ನಲ್ಲಿ ಭಾರತೀಯ ವಾಯುಪಡೆಯ (IAF) ಫೈಟರ್ ಸ್ಕ್ವಾಡ್ರನ್‌ನೊಂದಿಗೆ ಹಾರಾಟ ನಡೆಸಿದ್ದಅವರಿಗೆ, ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!