Saturday, September 13, 2025

ನಿಮ್ಮ ರಾಜಧರ್ಮ ಎಲ್ಲಿದೆ? ಪ್ರಧಾನಿ ಮೋದಿ ಮಣಿಪುರ ಭೇಟಿಗೆ ಖರ್ಗೆ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸವನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ಮಣಿಪುರ ಪೀಪಲ್ಸ್ ಪಾರ್ಟಿ (MPP) ಯುವ ಘಟಕಗಳ ಕಾರ್ಯಕರ್ತರು ಶನಿವಾರ ಪ್ರಧಾನಿ ಕಾರ್ಯಕ್ರಮ ನಡೆಯುತ್ತಿರುವ ಕಾಂಗ್ಲಾ ಕೋಟೆ ಸಮೀಪದಲ್ಲಿ ಬಳಿ ಪ್ರತಿಭಟನೆ ನಡೆಸಿದರು.

ಭಿತ್ತಪತ್ರ ಹಿಡಿದು ಪ್ರಧಾನಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಶಾಂತಿ ಮತ್ತು ಸಹಜ ಪರಿಸ್ಥಿತಿಯನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಪ್ರಧಾನಿ ಭೇಟಿ ನೀಡಿಲ್ಲ ಎಂದು ಆರೋಪಿಸಿದರು. ಪ್ರಧಾನಿ ಕಾರ್ಯಕ್ರಮದ ಸ್ಥಳಕ್ಕೆ ಪ್ರತಿಭಟನಾಕಾರರು ತೆರಳದಂತೆ ಪೊಲೀಸ್ ಸಿಬ್ಬಂದಿ ತಡೆದರು.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಮಣಿಪುರ ಭೇಟಿಯನ್ನು’ಪಿಟ್ ಸ್ಟಾಪ್’ ಎಂದು ಕರೆದಿರುವ ಕಾಂಗ್ರೆಸ್, ಈ ಪ್ರವಾಸವನ್ನು ‘ಟೋಕನಿಸಂ’ ಮತ್ತು ರಾಜ್ಯದ ಜನರಿಗೆ ಮಾಡುವ “‘ಘೋರ ಅವಮಾನ’ ಎಂದು ಆರೋಪಿಸಿದೆ.

ಮೋದಿಗಾಗಿ ಅದ್ಧೂರಿ ಸ್ವಾಗತ ಸಮಾರಂಭವನ್ನು ಆಯೋಜಿಸಿದ್ದಾರೆ. ಇದು ಗಾಯಗಳಿಂದ ಇನ್ನೂ ನರಳುತ್ತಿರುವವರಿಗೆ ‘ಕ್ರೂರ ಮುಳ್ಳು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ. ನಿಮ್ಮದೇ ಮಾತಿನಲ್ಲಿ ಹೇಳುವುದಾದರೆ ನಿಮ್ಮ ರಾಜಧರ್ಮ ಎಲ್ಲಿದೆ? ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮೋದಿ ಅವರನ್ನು ಖರ್ಗೆ ಪ್ರಶ್ನಿಸಿದ್ದಾರೆ.

‘ನರೇಂದ್ರ ಮೋದಿ ಅವರೇ, ನಿಮ್ಮ ಮೂರು ಗಂಟೆಗಳ ಮಣಿಪುರ ಪಿಟ್ ಸ್ಟಾಪ್, ಇದು ಪರಿಹಾರವಲ್ಲ. ಇದು ಟೋಕನಿಸಂ ಮತ್ತು ಗಾಯಾಳು ಜನರಿಗೆ ಮಾಡುವ ಅವಮಾನವಾಗಿದೆ. ನಿಮ್ಮ ಸೋಕಾಲ್ಡ್ ರೋಡ್ ಶೋ ನಿರಾಶ್ರಿತರ ಶಿಬಿರಗಳಿಂದ ಜನರ ಸಂಕಷ್ಟ ಕೇಳುವ ಬದಲು ಹೇಡಿತನದಿಂದ ಪರಾರಿಯಾಗುವುದಾಗಿದೆ. 864 ದಿನಗಳ ಹಿಂಸಾಚಾರದಲ್ಲಿ 300 ಜನರು ಸಾವನ್ನಪ್ಪಿದ್ದಾರೆ. 67,000 ಜನರು ನಿರಾಶ್ರಿತರಾಗಿದ್ದು, 1,500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಗಿನಿಂದಲೂ ನೀವು 46 ವಿದೇಶಿ

ಪ್ರವಾಸ ಮಾಡಿದ್ದೀರಿ, ಆದರೆ ಆದರೆ ನಿಮ್ಮ ಸ್ವಂತ ಜನರೊಂದಿಗೆ ಸಹಾನುಭೂತಿಯ ಎರಡು ಪದಗಳನ್ನು ಹಂಚಿಕೊಳ್ಳಲು ಒಂದೇ ಒಂದು ಬಾರಿಯೂ ಭೇಟಿ ನೀಡಿಲ್ಲ’ ಎಂದು ಖರ್ಗೆ ಅವರು ಟೀಕಿಸಿದ್ದಾರೆ.
ನಿಮ್ಮ ಡಬಲ್ ಎಂಜಿನ್ ಸರ್ಕಾರ ಮಣಿಪುರದ ಅಮಾಯಕ ಜನರ ಜೀವನವನ್ನು ನಾಶಮಾಡಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಎಲ್ಲಾ ಸಮುದಾಯಗಳಿಗೆ ದ್ರೋಹ ಬಗೆದಿದ್ದೀರಿ. ಹಿಂಸಾಚಾರ ಇನ್ನೂ ಮುಂದುವರೆದಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಲು ಬಿಜೆಪಿಯೇ ಕಾರಣವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಇದನ್ನೂ ಓದಿ