Monday, January 12, 2026

ದಸರಾಗೆ ಗಜಪಡೆ ತಾಲೀಮು: ಸುಗ್ರೀವನೇ ಬಲಶಾಲಿ, ಆನೆಗಳಿಗೆ ವಿಶೇಷ ಆಹಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಾಡಹಬ್ಬ ದಸರಾ ದಿನದಿಂದ ದಿನಕ್ಕೆ ಸಾಂಸ್ಕೃತಿಕ ನಗರಿಯಲ್ಲಿ ರಂಗು ಪಡೆಯುತ್ತಿದೆ. ಗಜಪಡೆಯ ತಾಲೀಮನ್ನು ನೋಡಲು ಜನಸಾಗರವೇ ಬರುತ್ತಿದೆ. ಇಂದು ಗಜಪಡೆಯ ಎರಡನೇ ತಂಡದ ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ ಸುಗ್ರೀವ 5545 ಕೇಜಿ ತೂಗುವ ಮೂಲಕ 14 ಆನೆಗಳ ಗಜಪಡೆಯಲ್ಲಿಯೇ ಅತೀ ಹೆಚ್ಚು ತೂಕದ ಆನೆಯಾಗಿದೆ.

ಇಂದು ಗೌರಿ ಹಬ್ಬದ ಹಿನ್ನೆಲೆ 14 ಆನೆಗಳಿಗೆ ಸಂಪೂರ್ಣ ತಾಲೀಮನ್ನು ಮಾಡಿಸುವ ಮೂಲಕ ಜಂಬೂಸವಾರಿಗೆ ಗಜಪಡೆಯನ್ನು ಅರಣ್ಯ ಇಲಾಖೆ ಸಜ್ಜುಗೊಳಿಸುತ್ತಿದೆ. ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಗಜಪಡೆಯನ್ನು ಸರ್ವಸನ್ನದ್ಧಗೊಳಿಸಲು ದಿನಕ್ಕೆ ಎರಡು ಬಾರಿ ತಾಲೀಮು ನಡೆಸಲಾಗುತ್ತಿದೆ. ಜೊತೆಗೆ ವಿಶೇಷ ಆಹಾರ ನೀಡಿ ಗಜಪಡೆಯನ್ನು ಬಲಶಾಲಿಗೊಳಿಸಲಾಗುತ್ತಿದೆ.

ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ ಬಂದ 9 ಗಜಪಡೆ ಹಾಗೂ ಎರಡನೇ ತಂಡದ 5 ಗಜಪಡೆಗಳು ಇಂದು ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಪೊಲೀಸ್ ಭದ್ರತೆಯಲ್ಲಿ ಅಂಬಾವಿಲಾಸ ಅರಮನೆಯ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆ ಮುಂಭಾಗದ ಬಲರಾಮ ದ್ವಾರದ ಮೂಲಕ ಕೆ.ಆರ್. ಸರ್ಕಲ್, ಸಯ್ಯಾಜಿರಾವ್ ರಸ್ತೆ ಹಾಗೂ ಆಯುರ್ವೇದಿಕ್ ಸರ್ಕಲ್ ಮೂಲಕ ಜಂಬೂಸವಾರಿ ಸಾಗುವ ರಸ್ತೆಯಲ್ಲಿ ಸಂಪೂರ್ಣ ತಾಲೀಮು ನಡೆಸಿದವು.

ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಎರಡು ಹಂತದಲ್ಲಿ ತಾಲೀಮು ನಡೆಸುವ ಜೊತೆಗೆ ಮಧ್ಯಾಹ್ನ ವಿಶೇಷ ಆಹಾರ ನೀಡಲಾಗುತ್ತದೆ. ಇದರ ಮಧ್ಯೆ ಗಜಪಡೆಗೆ ಮಜ್ಜನ ನೀಡುವ ಮೂಲಕ ಗಜಪಡೆಯನ್ನು ಜಂಬೂಸವಾರಿಗೆ ಸಿದ್ಧಗೊಳಿಸಲಾಗುತ್ತಿದೆ. ಈ ಬಾರಿಯ ಗಜಪಡೆಯಲ್ಲಿ 5545 ಕೇಜಿ ತೂಕ ಹೊಂದುವ ಮೂಲಕ ಸುಗ್ರೀವ ಗಮನ ಸೆಳೆದರೆ, ಅತ್ಯಂತ ಕಿರಿಯ ಆನೆಯಾದ 11 ವರ್ಷದ ಹೇಮಾವತಿ 2,440 ಕೆ.ಜಿ ಮೂಲಕ ಅತಿ ಕಡಿಮೆ ತೂಕ ಹೊಂದಿದೆ.

Related articles

Comments

LEAVE A REPLY

Please enter your comment!
Please enter your name here

ಇತರರಿಗೂ ಹಂಚಿ

Latest articles

Newsletter

error: Content is protected !!