ಹೊಸದಿಗಂತ ಡಿಜಿಟಲ್ ಡೆಸ್ಕ್:
“ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 141 ಸ್ಥಾನಗಳನ್ನು ಗೆಲ್ಲುವುದು ಖಚಿತ, ಇದನ್ನು ಬೇಕಿದ್ದರೆ ಈಗಲೇ ಬರೆದಿಟ್ಟುಕೊಳ್ಳಿ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರೋಧ ಪಕ್ಷಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಹಾವೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ’ ಹಾಗೂ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ಮುಂದಿಟ್ಟರು.
ಈಗಾಗಲೇ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳು ಯಶಸ್ವಿಯಾಗಿ ಚಾಲ್ತಿಯಲ್ಲಿವೆ. ಇದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಸರ್ಕಾರವು ಆರನೇ ಗ್ಯಾರಂಟಿಯಾಗಿ ‘ಭೂಮಿ ಗ್ಯಾರಂಟಿ’ ನೀಡುತ್ತಿದೆ. ಸುಮಾರು 1,11,111 ಜನರಿಗೆ ಪೋಡಿ ಮತ್ತು ಖಾತಾ ಮಾಡಿಕೊಡುವ ಮೂಲಕ ಅವರ ಮುಂದಿನ ಪೀಳಿಗೆಗೆ ಆಸ್ತಿಯ ಹಕ್ಕನ್ನು ಅಧಿಕೃತವಾಗಿ ವರ್ಗಾಯಿಸಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಅವರು ಹೆಮ್ಮೆಯಿಂದ ನುಡಿದರು.
ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದ ಡಿಕೆಶಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು. “ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೂಡಲೇ ಅನುಮತಿ ನೀಡಬೇಕು. ಒಂದು ವೇಳೆ ಅನುಮತಿ ಸಿಕ್ಕರೆ, ನಾವು ಏಳನೇ ಗ್ಯಾರಂಟಿಯಾಗಿ ‘ನೀರಿನ ಗ್ಯಾರಂಟಿ’ ನೀಡಲಿದ್ದೇವೆ” ಎಂದು ಘೋಷಿಸಿದರು.



