ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಆಡಳಿತ ಸುಧಾರಣೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಆಡಳಿತ ಸುಧಾರಣಾ ಆಯೋಗವು (KARC) ತನ್ನ 9ನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಈ ವರದಿಯನ್ನು ಸಿಎಂಗೆ ಹಸ್ತಾಂತರಿಸಿದರು.
ಆಯೋಗದ 9ನೇ ವರದಿಯಲ್ಲಿ ಒಟ್ಟು 449 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. ಮೂರು ಪ್ರಮುಖ ವಿಷಯಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ದೇಶಪಾಂಡೆ ಅವರು ಮಾಹಿತಿ ನೀಡಿದರು.
ಮಂಡಳಿ/ನಿಗಮಗಳ ಪುನರ್ರಚನೆ: ಈ ವರದಿಯಲ್ಲಿ ಅತ್ಯಂತ ಪ್ರಮುಖವಾಗಿ, 7 ಬೋರ್ಡ್ (ಮಂಡಳಿ) ಮತ್ತು ಕಾರ್ಪೊರೇಷನ್ಗಳನ್ನು (ನಿಗಮ) ಮುಚ್ಚಲು ಹಾಗೂ 9 ಮಂಡಳಿ/ನಿಗಮಗಳನ್ನು ವಿಲೀನಗೊಳಿಸಲು ಶಿಫಾರಸು ಮಾಡಲಾಗಿದೆ.
ದೇಶಪಾಂಡೆ ಅವರ ವಿವರಣೆ: ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ, “ಜನರ ಹಣ ಇದು. ಆ ಹಣದ ಉಪಯೋಗ ಜನರಿಗೆ ಆಗಬೇಕು. ಇವತ್ತಿನ ಕಾಲದಲ್ಲಿ ಅವಶ್ಯಕತೆ ಇಲ್ಲದ ಬೋರ್ಡ್ಗಳನ್ನು ಮುಚ್ಚಲು ಹೇಳಿದ್ದೇವೆ” ಎಂದರು. ಮುಚ್ಚಲು ಸಲಹೆ ನೀಡಿರುವ ಮಂಡಳಿಗಳಲ್ಲಿ ಕೆಲಸವೇ ಇಲ್ಲ ಅಥವಾ ಹಣಕಾಸಿನ ನೆರವು ಇಲ್ಲದಿರುವುದೇ ಕಾರಣವಾಗಿದೆ ಎಂದು ತಿಳಿಸಿದರು.
ಇತರೆ ಸುಧಾರಣೆಗಳು:
ಉಳಿದ ಮಂಡಳಿಗಳ ಸುಧಾರಣೆ: ಉಳಿದ ಬೋರ್ಡ್ ಮತ್ತು ಕಾರ್ಪೊರೇಷನ್ಗಳ ಅಭಿವೃದ್ಧಿ ಮತ್ತು ಸುಧಾರಣೆ ಕುರಿತು 379 ಶಿಫಾರಸುಗಳನ್ನು ಮಾಡಲಾಗಿದೆ.
ಭೂಸ್ವಾಧೀನ: ಭೂಸ್ವಾಧೀನ ಪ್ರಕ್ರಿಯೆಗಳ ಸುಧಾರಣೆಗಾಗಿ 15 ಶಿಫಾರಸುಗಳನ್ನು ನೀಡಲಾಗಿದೆ.
ಆಡಳಿತಾತ್ಮಕ ಮತ್ತು ಇ-ಸುಧಾರಣೆ: ಸಾಮಾನ್ಯ ಆಡಳಿತಾತ್ಮಕ ಮತ್ತು ಇ-ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ 55 ಶಿಫಾರಸುಗಳನ್ನು ಮಾಡಲಾಗಿದೆ.
ಮುಖ್ಯಮಂತ್ರಿಗಳು ವರದಿಯನ್ನು ಅಂಗೀಕಾರ ಮಾಡುವುದಾಗಿ ಹೇಳಿದ್ದಾರೆ ಎಂದು ದೇಶಪಾಂಡೆ ತಿಳಿಸಿದರು, ಆದರೆ ಆಡಳಿತವು ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

